ADVERTISEMENT

ಎಸಿಬಿ ಪರಿಶೀಲನೆ: ಚಿಕ್ಕಬಳ್ಳಾಪುರ ಇಒ ಬಳಿ ಮೂರು ಮನೆ, 1 ನಿವೇಶನ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 18:56 IST
Last Updated 30 ಆಗಸ್ಟ್ 2018, 18:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಚಿಕ್ಕಬಳ್ಳಾಪುರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಪಿ.ಸಂಜೀವಪ್ಪ ಅವರು ಮೂರು ಮನೆ, ಒಂದು ನಿವೇಶನ, ಮೂರು ಕಾರು, ಎರಡು ದ್ವಿಚಕ್ರ ವಾಹನ ಮತ್ತು ಕೃಷಿ ಭೂಮಿ ಹೊಂದಿರುವುದನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ‍ಪತ್ತೆ ಹಚ್ಚಿದೆ.

ಕಾರ್ಯನಿರ್ವಾಹಕ ಅಧಿಕಾರಿ ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ದೂರು ಆಧರಿಸಿ ಎಸಿಬಿ ಅಧಿಕಾರಿಗಳು, ಅವರ ಬೆಂಗಳೂರು, ಚಿಕ್ಕಬಳ್ಳಾಪುರದ ಮನೆ, ಕಚೇರಿ ಮೇಲೆ ಬುಧವಾರ ದಾಳಿ ನಡೆಸಿ ಆಸ್ತಿಪಾಸ್ತಿಗೆ ಸಂಬಂಧಿಸಿದ ಕಾಗದಪತ್ರಗಳನ್ನು ಪರಿಶೀಲಿಸಿದರು.

ಬಿಟಿಎಂ ಬಡಾವಣೆಯಲ್ಲಿ ಮೂರು ಅಂತಸ್ತಿನ ಮನೆ, ಬೇಗೂರಿನ ವಿರಾಟ್‌ನಗರದಲ್ಲಿ ಮೂರು ಅಂತಸ್ತಿನ ಮನೆ, ಒಂದು ನಿವೇಶನ, ಗೊಟ್ಟಿಗೆರೆಯಲ್ಲಿ ಒಂದು ಮನೆ, ತಮಿಳುನಾಡು ಕೃಷ್ಣಗಿರಿ ಜಿಲ್ಲೆ ಡೆಂಕಣಿಕೋಟೆ ಸಾರಕ್ಕಿಪಲ್ಲಿಯಲ್ಲಿ 1.18 ಎಕರೆ ಕೃಷಿ ಜಮೀನು, ಆನೇಕಲ್‌ ತಾಲೂಕು ಅತ್ತಿಬೆಲೆ ಹೋಬಳಿ ಅರೇಹಳ್ಳಿಯಲ್ಲಿ 17 ಗುಂಟೆ ಜಮೀನನ್ನು ಅವರು ಹೊಂದಿದ್ದಾರೆ.

ADVERTISEMENT

307ಗ್ರಾಂ ಚಿನ್ನ, 2.5 ಕೆ.ಜಿ ಬೆಳ್ಳಿ, ಎರಡು ದ್ವಿಚಕ್ರ ವಾಹನಗಳೂ ಅವರ ಮನೆಯಲ್ಲಿ ಸಿಕ್ಕಿದೆ. ಅಲ್ಲದೆ, ಅಧಿಕಾರಿ ಹಾಗೂ ಕುಟುಂಬ ಸದಸ್ಯರ ಬ್ಯಾಂಕ್‌ ಖಾತೆಗಳಲ್ಲಿ ₹ 12.5 ಲಕ್ಷ ನಗದು ಹಾಗೂ ₹ 13.57 ಲಕ್ಷ ಬಾಳುವ ಪೀಠೋಪಕರಣಗಳು ದೊರೆತಿವೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.