ಚಿತ್ರದುರ್ಗ: ಇಲ್ಲಿನ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಡಾನ್ ಬಾಸ್ಕೊ ಶಾಲೆಯ ಮುಂಭಾಗದ ಮೇಲ್ಸೇತುವೆಯಲ್ಲಿ ಲಾರಿ, ಆಂಬುಲೆನ್ಸ್ ಹಾಗೂ ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಸೀಬಾರ ಗ್ರಾಮದ ನಾಗರಾಜ (36), ಆಯಿತೋಳ್ ಗ್ರಾಮದ ಬಿ.ಕರಿಯಪ್ಪ (37) ಹಾಗೂ ಎಂ.ಕರಿಯಪ್ಪ (38) ಮೃತರು. ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಹೆದ್ದಾರಿ ಶುಚಿಗೊಳಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯ ಹೊಣೆ ಹೊತ್ತಿರುವ ಪಿಎನ್ಸಿ ಕಂಪನಿ ಹೆದ್ದಾರಿ ಶುಚಿಗೊಳಿಸಲು ಕಾರ್ಮಿಕರನ್ನು ನಿಯೋಜಿಸಿತ್ತು. ಲಾಕ್ಡೌನ್ ಕಾರಣಕ್ಕೆ ವಾಹನ ದಟ್ಟಣೆ ಕಡಿಮೆ ಇರುವುದರಿಂದ ಟ್ರ್ಯಾಕ್ಟರ್ ನಿಲ್ಲಿಸಿಕೊಂಡು ಹೆದ್ದಾರಿ ಬದಿಯ ಮಣ್ಣು ತೆಗೆದು ಲಾರಿಗೆ ತುಂಬುತ್ತಿದ್ದರು. ಬೆಂಗಳೂರು ಕಡೆಯಿಂದ ವೇಗವಾಗಿ ಬಂದ ಲಾರಿಯೊಂದು ಮತ್ತೊಂದು ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಸರಣ ಅಪಘಾತ ನಡೆಸಿದೆ.
ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಮುಂಭಾಗದಲ್ಲಿದ್ದ ಆಂಬುಲೆನ್ಸ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಹೆದ್ದಾರಿಯಲ್ಲಿ ನಿಂತಿದ್ದ ಟ್ರ್ಯಾಕ್ಟರ್ಗೆ ಅಪ್ಪಳಿಸಿದೆ. ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರು ತೀವ್ರವಾಗಿ ಗಾಯಗೊಂಡು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಸಂಚಾರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.