ADVERTISEMENT

ಅನಾಥ ಮಕ್ಕಳಿಗೆ ಆದಿಚುಂಚನಗಿರಿ ಮಠದ ಆಸರೆ

​ಪ್ರಜಾವಾಣಿ ವಾರ್ತೆ
Published 20 ಮೇ 2021, 17:24 IST
Last Updated 20 ಮೇ 2021, 17:24 IST
ನಿರ್ಮಲಾನಂದನಾಥ ಸ್ವಾಮೀಜಿ
ನಿರ್ಮಲಾನಂದನಾಥ ಸ್ವಾಮೀಜಿ   

ಬೆಂಗಳೂರು: ಕೋವಿಡ್‌ನಿಂದ ತಂದೆ, ತಾಯಿ ಮತ್ತು ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಆಶ್ರಯ ನೀಡಿ, ಅವರ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಆದಿಚುಂಚನಗಿರಿ ಮಠ ಪ್ರಕಟಿಸಿದೆ.

‘ಕೋವಿಡ್‌ನ ಎರಡನೆ ಅಲೆಯಿಂದ ಜನರು ತೀವ್ರವಾದ ಸಂಕಷ್ಟ ಅನುಭವಿಸುತ್ತಿದ್ದಾರೆ. ಸೋಂಕಿನಿಂದ ತಂದೆ, ತಾಯಿ ಮತ್ತು ಪೋಷಕರನ್ನು ಕಳೆದುಕೊಂಡು ಅನೇಕ ಮಕ್ಕಳು ಅನಾಥರಾಗಿರುವ ಸುದ್ದಿಗಳು ಬರುತ್ತಿವೆ. ಈ ರೀತಿ ಸಂಕಷ್ಟದಲ್ಲಿರುವ ಮಕ್ಕಳಿಗೆ ಆದಿಚುಂಚನಗಿರಿ ಕ್ಷೇತ್ರದಲ್ಲಿ ಊಟ ವಸತಿ ಕಲ್ಪಿಸಿ ಅವರ ಭವಿಷ್ಯದ ಬದುಕಿಗೆ ಪೂರಕವಾಗುವ ಶಿಕ್ಷಣ ಒದಗಿಸಲಾಗುವುದು’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.

ಅನಾಥ ಮಕ್ಕಳ ಬಗ್ಗೆ ತಿಳಿದವರು ಅವರನ್ನು ಮಠಕ್ಕೆ ಕರೆತಂದು ಬಿಡಬಹುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ ಸಂಖ್ಯೆ 9448071803 ಅಥವಾ 9148024141 ಸಂಪರ್ಕಿಸಬಹುದು ಎಂದು ಮನವಿ ಮಾಡಿದ್ದಾರೆ.

ADVERTISEMENT

ಕೋವಿಡ್ ಸಂಕಷ್ಟದಲ್ಲಿ ಜನರು ತೊಂದರೆಗೀಡಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಶ್ರೀ ಮಠವು ಬೆಂಗಳೂರಿನ ಆಯುರ್ವೇದ ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್, ಬೆಳ್ಳೂರು ಕ್ರಾಸ್‌ನ ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ವ್ಯವಸ್ಥೆ, ಚಿಕ್ಕಬಳ್ಳಾಪುರದಲ್ಲಿ ಸೋಂಕಿತರಿಗೆ ಸಾರಿಗೆ ವ್ಯವಸ್ಥೆ ಹಾಗೂ ಔಷಧಿ ಕಿಟ್ ನೀಡುವುದನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಈ ಕಾರ್ಯಗಳ ಮುಂದುವರಿದ ಭಾಗವಾಗಿ, ಅನಾಥ ಮಕ್ಕಳಿಗೆ ನೆರವು ನೀಡುವ ಕೆಲಸವನ್ನೂ ಆರಂಭಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.