ಬೆಂಗಳೂರು: ಭಾರತೀಯ ಜಾಹೀರಾತು ಸಂಸ್ಥೆಗಳ ಸಂಘಟನೆಯು (ಎಎಎಐ) ಜಾಹೀರಾತು ಕ್ಷೇತ್ರದಲ್ಲಿನ ಸಾಧನೆಗೆ ಪ್ರತಿ ವರ್ಷ ಕೊಡುವ ‘ಜೀವಮಾನ ಸಾಧನೆ’ ಪ್ರಶಸ್ತಿಯು ಈ ಬಾರಿ, ಪ್ರೇಮ್ ಅಸೋಸಿಯೇಟ್ಸ್ ಅಡ್ವರ್ಟೈಸಿಂಗ್ ಆ್ಯಂಡ್ ಮಾರ್ಕೆಂಟಿಂಗ್ ಸಂಸ್ಥೆಯ ಹಿರಿಯ ಪಾಲುದಾರ ಕೃಷ್ಣಾ ಪ್ರೇಮ್ನಾರಾಯಣ್ ಅವರಿಗೆ ಸಂದಿದೆ.
ಜಾಹೀರಾತು ಕ್ಷೇತ್ರದಲ್ಲಿ 25 ವರ್ಷಕ್ಕಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿರುವ, ಆಡಳಿತ ಮಂಡಳಿಯ ಹುದ್ದೆಗಳಲ್ಲಿ ದುಡಿದಿರುವ ಮತ್ತು ಉದ್ದಿಮೆ ಕ್ಷೇತ್ರದಲ್ಲಿ ಸಕ್ರಿಯರಾಗಿರುವವರಿಗೆ ಎಎಎಐ ಈ ಪ್ರಶಸ್ತಿ ನೀಡುತ್ತದೆ.
‘ಕೃಷ್ಣಾ ಅವರು, ಜಾಹೀರಾತು ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಅವರಿಗೆ ಈ ಗೌರವ ಸಲ್ಲಿಸಲಾಗುತ್ತಿದೆ. ಕೃಷ್ಣಾ ಅವರು 1988ರಲ್ಲಿ ಎಎಎಐ ಅಧ್ಯಕ್ಷರಾಗಿ ಆಯ್ಕೆಯಾದಾಗ ಅವರಿಗೆ 36 ವರ್ಷ. ಸಂಸ್ಥೆಗಾಗಿ ಅವರು ದುಡಿದಿದ್ದಾರೆ. ಹಲವು ಸುಧಾರಣೆಗಳನ್ನು ತಂದಿದ್ದಾರೆ. ಅಧ್ಯಕ್ಷರಾಗಿ ಅವರ ಅವಧಿ ಮುಗಿದ ನಂತರ ಅವರು, ಎಎಎಐ–ಸರ್ಕಾರದ ಸಂಬಂಧ ಸಮಿತಿಯ ಮುಖ್ಯಸ್ಥರಾಗಿ ದುಡಿದಿದ್ದಾರೆ. ಜಾಹೀರಾತಿನ ಮೇಲೆ ತೆರಿಗೆ, ಸೇವಾ ತೆರಿಗೆ ಜಾರಿಯಾಗುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಆಡಿಟ್ ಬ್ಯೂರೊ ಆಫ್ ಸರ್ಕ್ಯುಲೇಷನ್ನ (ಎಬಿಸಿ) ಮುಖ್ಯಸ್ಥರಾಗಿ ಮತ್ತು ನ್ಯಾಷನಲ್ ರೀಡರ್ಶಿಪ್ ಸರ್ವೆ ಕೌನ್ಸಿಲ್ನ (ಎನ್ಆರ್ಎಸ್ಸಿ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ’ ಎಂದು ಎಎಎಐ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.