ಕಾರವಾರ:ಭಟ್ಕಳದಕೋವಿಡ್ 19 ಪೀಡಿತ ಎಲ್ಲ 11 ಮಂದಿಯೂ ಗುಣಮುಖರಾಗಿದ್ದು, ಜಿಲ್ಲೆಯ ಜನರುನಿಟ್ಟುಸಿರು ಬಿಡುವಂತಾಗಿದೆ.
ನೌಕಾಪಡೆಯ ಕಾರವಾರದ ಐ.ಎನ್.ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ11ನೇ ಸೋಂಕಿತ ವ್ಯಕ್ತಿಯನ್ನು ಗುರುವಾರ ಸಂಜೆ ಬಿಡುಗಡೆ ಮಾಡಲಾಗಿದೆ. ಅವರ ಗಂಟಲುದ್ರವದ ಮಾದರಿಯ ಎರಡನೇ ಪರೀಕ್ಷಾ ವರದಿಯೂ ನೆಗೆಟಿವ್ ಬಂದಿದೆ.
ಜಿಲ್ಲೆಯಲ್ಲಿ ಕೊನೆಯ ಪ್ರಕರಣವುಏ.14ರಂದು ವರದಿಯಾಗಿತ್ತು. ಆ ಬಳಿಕ ಹೊಸ ಪ್ರಕರಣಗಳು ದೃಢಪಟ್ಟಿಲ್ಲ. ಎಲ್ಲ ಸೋಂಕಿತರೂ ಭಟ್ಕಳದವರಾಗಿದ್ದು, ದುಬೈನಿಂದ ವಾಪಸಾದವರು ಹಾಗೂ ಅವರ ಕುಟುಂಬಸದಸ್ಯರಾಗಿದ್ದಾರೆ. ಗುರುವಾರ ಬಿಡುಗಡೆಯಾದ ವ್ಯಕ್ತಿಯ ಪತ್ನಿ ಗರ್ಭಿಣಿಯಾಗಿದ್ದು, ಅವರಿಗೂ ಕೋವಿಡ್ 19 ದೃಢಪಟ್ಟಿತ್ತು. ಉಡುಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಗುಣಮುಖರಾಗಿದ್ದರು.
ಸದ್ಯ ಕೋವಿಡ್ 19 ದೃಢಪಟ್ಟ ಪ್ರಕರಣಗಳು ಇಲ್ಲದಿರುವ ಕಾರಣ ಜಿಲ್ಲೆಯಲ್ಲಿ ಲಾಕ್ಡೌನ್ ನಿರ್ಬಂಧಗಳ ಸಡಿಲಿಕೆ, ವಾಣಿಜ್ಯ ಚಟುವಟಿಕೆಗಳು, ನಾಗರಿಕರ ಸಂಚಾರಕ್ಕೆ ನಿರ್ಬಂಧ ತೆರವುಕುರಿತುಜಿಲ್ಲಾ ಉಸ್ತುವಾರಿ ಸಚಿವರು ನಿರ್ಧಾರ ಪ್ರಕಟಿಸಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಇನ್ನು ಮುಂದಿನ ಆಡಳಿತಾತ್ಮಕ ಕ್ರಮಗಳ ಬಗ್ಗೆ ಎಲ್ಲ ವಿಭಾಗ, ಇಲಾಖೆಗಳ ಮುಖಂಡರ ಜೊತೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಪೊಲೀಸ್ ಇಲಾಖೆಯು ಸಾರ್ವಜನಿಕರ ಚಟುವಟಿಕೆಗಳ ಮೇಲೆ ಸ್ವಯಂ ಸೇವಕರು ಮತ್ತು ಟಾಸ್ಕ್ಫೋರ್ಸ್ಗಳ ನೆರವಿನೊಂದಿಗೆಗಮನವಿಡಲಿದೆ. ನಿಯಮದ ಉಲ್ಲಂಘನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.
‘ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಇರುವ ಮಾದರಿಯಲ್ಲೇ ನಗರ, ಪಟ್ಟಣಗಳ ವಾರ್ಡ್ ಮಟ್ಟದಲ್ಲಿ ಟಾಸ್ಕ್ಫೋರ್ಸ್ ರಚಿಸಲಾಗುವುದು. ಜಿಲ್ಲೆಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳ ಮೇಲೆ ನಿಗಾ ಇಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ 19 ಸಮರ ಕೊಠಡಿ (ವಾರ್ ರೂಂ) ಆರಂಭಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.