ಬೆಂಗಳೂರು: ‘ಚಿಲುಮೆ ಸಂಸ್ಥೆಯ ಮೂಲಕ ಮತದಾರರ ಮಾಹಿತಿ ಕಳವು ನಡೆದಿರುವ ಪ್ರಕರಣದಲ್ಲಿ ಸುಳ್ಳಿನ ಮೂಲಕ ಸತ್ಯಾಂಶ ಮರೆಮಾಚಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಈ ಸಂಬಂಧ ಬಿಜೆಪಿಗೆ 11 ಪ್ರಶ್ನೆಗಳನ್ನುಕೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೊಮ್ಮಾಯಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ಈವರೆಗೂ ಏಕೆ ಎಫ್ಐಆರ್ ದಾಖಲಿಸಿಲ್ಲ? ಕೇವಲ ಮತಗಟ್ಟೆ ಹಂತದ ಅಧಿಕಾರಿಗಳಾಗಿದ್ದ ಚಿಲುಮೆ ಸಿಬ್ಬಂದಿ ಮೇಲಷ್ಟೇ ಪ್ರಕರಣ ದಾಖಲಿಸಿರುವುದು ಏಕೆ? ರಾಜಕೀಯ ದುರುದ್ದೇಶದ ಆರೋಪದ ಎಂದು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಈಗ ಏಕೆ ತನಿಖೆಗೆ ಆದೇಶಿಸಿದ್ದಾರೆ’ ಎಂದು ಕೇಳಿದರು.
‘ಚಿಲುಮೆ ಸಂಸ್ಥೆ, ಚಿಲುಮೆ ಎಂಟರ್ಪ್ರೈಸಸ್, ಡಿಎಪಿ ಹೊಂಬಾಳೆ ಪ್ರೈವೇಟ್ ಲಿಮಿಟೆಡ್ಗಳ ನಿರ್ದೇಶಕರಾದ ಕೃಷ್ಣಪ್ಪ, ರವಿಕುಮಾರ್, ಬೈರಪ್ಪ, ಶೃತಿ, ನರಸಿಂಹಮೂರ್ತಿ ಮತ್ತು ಐಶ್ವರ್ಯಾ ವಿರುದ್ಧ ಏಕೆ ಪ್ರಕರಣ ದಾಖಲಿಸಿಲ್ಲ? ಮತದಾರರ ಮಾಹಿತಿ ಕದಿಯಲು ಬಳಸಿದ ಡಿಜಿಟಲ್ ಸಮೀಕ್ಷಾ ಆ್ಯಪ್ ವಿರುದ್ಧ ಕ್ರಮ ಏಕಿಲ್ಲ? ಚಿಲುಮೆ ಸಂಸ್ಥೆಗೆ 15 ಸಾವಿರ ಸಿಬ್ಬಂದಿ ನೇಮಿಸಿದ್ದು ನಿಜವೆ? ಈ ಸಂಸ್ಥೆಗೆ ಆರ್ಥಿಕ ನೆರವು ನೀಡಿದವರ ಹೆಸರನ್ನು ಮುಖ್ಯಮಂತ್ರಿ ಏಕೆ ಬಹಿರಂಗಡಿಸುತ್ತಿಲ್ಲ’ ಎಂದು 11 ಪ್ರಶ್ನೆಗಳನ್ನು ಬಿಜೆಪಿಗೆ ಕೇಳಿದರು.
‘ಈ ಪ್ರಕರಣದಲ್ಲಿ ಬಸವರಾಜ ಬೊಮ್ಮಾಯಿ ನೇರವಾಗಿ ಭಾಗಿ ಯಾಗಿದ್ದಾರೆ. ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದರೆ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ. ತಕ್ಷಣವೇ ಅವರು ಹುದ್ದೆಯಿಂದ ಕೆಳಗಿಳಿಯಬೇಕು. ಎಫ್ಐಆರ್ ದಾಖಲಿಸಿ ಅವರನ್ನು ಬಂಧಿಸಬೇಕು’ ಎಂದು ಸುರ್ಜೇವಾಲ ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.