ಬೆಂಗಳೂರು: ಸುಗಂಧ ದ್ರವ್ಯ ತಯಾರಿಕೆಗೆ ಬಳಸುವ ₹2.75 ಕೋಟಿ ಮೌಲ್ಯದ ಆಂಬರ್ ಗ್ರೀಸ್ (ತಿಮಿಂಗಲ ವಾಂತಿ) ಜಪ್ತಿ ಮಾಡಿರುವ ಚಿಕ್ಕಜಾಲ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
‘ಆರೋಪಿಗಳು ಆಡುಗೋಡಿ ಹಾಗೂ ಎಚ್ಎಸ್ಆರ್ ಬಡವಾಣೆ ನಿವಾಸಿಗಳು. ತಮಿಳುನಾಡಿನಿಂದ ವಾಹನದಲ್ಲಿ ಆಂಬರ್ಗ್ರೀಸ್ ತರುತ್ತಿದ್ದ ಅವರು ಅದನ್ನು ನಗರದ ವಿವಿಧ ಭಾಗಗಳಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ವಿಐಟಿ ರಸ್ತೆಯ ಗಂಗಾನಗರ ವೃತ್ತದಲ್ಲಿ ಇದನ್ನು ಮಾರುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅದರ ಆಧಾರದಲ್ಲಿ ದಾಳಿ ನಡೆಸಿ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಆರೋಪಿಗಳಿಂದ ಒಟ್ಟು 11 ಕೆ.ಜಿ ಆಂಬರ್ಗ್ರೀಸ್ ಜಪ್ತಿ ಮಾಡಲಾಗಿದೆ. 1 ಕೆ.ಜಿ ಆಂಬರ್ಗ್ರೀಸ್ಗೆ ₹ 25 ಲಕ್ಷ ಹಣ ಪಡೆಯುತ್ತಿದ್ದರು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ. ಆರೋಪಿಗಳು ಬಹಳ ದಿನಗಳಿಂದ ಈ ಕೆಲಸದಲ್ಲಿ ತೊಡಗಿದ್ದಾರೆ. ಹಿಂದೆ ಯಾರಿಗೆಲ್ಲಾ ಮಾರಾಟ ಮಾಡಿದ್ದಾರೆ ಎಂಬುದು ಇನ್ನೂ ಗೊತ್ತಾಗಿಲ್ಲ. ವಿಚಾರಣೆ ಮುಂದುವರಿಸಿ ಮತ್ತಷ್ಟು ಮಾಹಿತಿಗಳನ್ನು ಕಲೆಹಾಕಲಾಗುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.