ಬೆಂಗಳೂರು: ಹಲವು ವರ್ಷಗಳಿಂದ ಕರ್ನಾಟಕದಲ್ಲಿ ನೆಲಸಿರುವ ಹೊರ ರಾಜ್ಯದ ಹಲವರು ಈಗಲೂ ಕನ್ನಡ ಭಾಷೆ ಕಲಿಯದೆ ಕನ್ನಡ ಗೊತ್ತಿಲ್ಲ ಎಂದು ಹೇಳುವ ವಿಡಿಯೊಗಳನ್ನು ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿದ್ದೇವೆ. ಆದರೆ. ಅಮೆರಿಕ ಮೂಲದ ಈ ಉದ್ಯಮಿ ಅವರೆಲ್ಲರಿಗಿಂತ ವಿಭಿನ್ನ.
ಹೌದು, 2010ರಲ್ಲಿ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದಿದ್ದ ಈ ವ್ಯಕ್ತಿ ಈಗ ಉದ್ಯಮಿಯಾಗಿದ್ದು, ಕನ್ನಡ ಕಲಿತು ಮಾತನಾಡುತ್ತಿದ್ದಾರೆ. ಅಲ್ಲದೆ, ಕನ್ನಡ ಒಂದು ಅದ್ಭುತ ಭಾಷೆ, ಎಲ್ಲರೂ ಕನ್ನಡ ಕಲಿಯಬೇಕೆಂದು ಹೇಳುತ್ತಾರೆ. ಅವರೇ ್ಯಾಲಿಫೋರ್ನಿಯಾ ಬರಿಟೋ ಸಂಸ್ಥಾಪಕ ಉದ್ಯಮಿ ಬರ್ಟ್ರೆಂಡ್ ಮ್ಯುಲ್ಲರ್.
ವಿಜಯಶ್ರೇಷ್ಠ ಎನ್ನುವವರು ಮ್ಯುಲ್ಲರ್ ಜೊತೆ ಸಂಭಾಷಣೆ ನಡೆಸಿದ್ದು, ಕನ್ನಡ ಗೊತ್ತಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕುತ್ತರಿಸಿದ ಮ್ಯುಲ್ಲರ್, ನಾವು ಇಲ್ಲಿಗೆ ಬಂದಮೇಲೆ ಇಲ್ಲಿನ ಸಂಸ್ಕೃತಿ ಮತ್ತು ಭಾಷೆಯನ್ನು ಕಲಿಯಬೇಕು. ನಾನು ಸ್ವಲ್ಪ ಸ್ವಲ್ಪ ಕನ್ನಡ ಮಾತನಾಡುತ್ತೇನೆ. ಕನ್ನಡ ಒಂದು ಅದ್ಭುತ ಭಾಷೆ, ಕರ್ನಾಟಕಕ್ಕೆ ಬರುವ ಎಲ್ಲರೂ ಕನ್ನಡ ಕಲಿಯಬೇಕು. ಕನ್ನಡದಲ್ಲಿ ಮಾತನಾಡಬೇಕು ಎಂದು ಹೇಳಿದ್ದಾರೆ.
ರೆಬಲ್ ಸ್ಟಾರ್ ಅಂಬರೀಷ್ ಅವರ ಭೇಟಿ ಕುರಿತಂತೆಯೂ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ನಾವು ಬೆಂಗಳೂರಿಗೆ ಬಂದಾಗ ಅಂಬರೀಷ್ 60ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಬೆಂಗಳೂರಿನಲ್ಲಿ ಹಲವೆಡೆ ಅವರ ಪೋಸ್ಟರ್ ನೋಡಿದೆವು. ಜನ ಇಷ್ಟೊಂದು ಪ್ರೀತಿಸುವ ಈ ವ್ಯಕ್ತಿ ಯಾರೆಂದು ನಮಗೆ ಅಚ್ಚರಿಯಾಯಿತು. ಬಳಿಕ, ಅವರು ಮತ್ತು ಕಿಚ್ಚ ಸುದೀಪ್ ನಟಿಸಿರುವ ವೀರ ಪರಂಪರೆ ಚಿತ್ರ ನೋಡಿದೆವು. ಅವರೊಬ್ಬ ಒಳ್ಳೆಯ ನಟ ಎಂಬುದು ನಮಗೆ ಗೊತ್ತಾಯಿತು. ಅವರು ಎಲ್ದಿ ಇರುತ್ತಾರೆ ಎಂದು ಆಟೊ ಡ್ರೈವರ್ ಒಬ್ಬರನ್ನು ಕೇಳಿದೆವು. ಜೆ.ಪಿ. ನಗರದಲ್ಲಿ ಇರುತ್ತಾರೆ ಎಂದು ಹೇಳಿದರು. ಬಳಿಕ, ಅಂಬರೀಷ್ ಅವರ ಮನೆ ಬಳಿ ನನ್ನನ್ನು ಡ್ರಾಪ್ ಮಾಡಿದರು. ಅವರೊಬ್ಬ ಒಳ್ಳೆಯ ವ್ಯಕ್ತಿ ಎಂದು ಉದ್ಯಮಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.