ಶಿರಸಿ: ಕೊರೊನಾ ಮತ್ತು ಇಸ್ಲಾಂ ಭಯೋತ್ಪಾದನೆಗೆ ತಳಕು ಹಾಕಿ ಸರಣಿ ಬರಹ ಬರೆದಿದ್ದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರು, ಈಗ ‘ಭಾರತವನ್ನು ಸರ್ವನಾಶ ಮಾಡಲು ಕೊರೊನಾ ಜಿಹಾದ್, ಸಂಶಯವೇ ಬೇಡ, ಇದು ಕಟುಸತ್ಯ’ ಎಂಬ ಮತ್ತೊಂದು ಸರಣಿಯನ್ನು ಆರಂಭಿಸಿದ್ದಾರೆ.
‘ತಬ್ಲೀಗ್ ಜಮಾತ್ ಭಾರತದಲ್ಲಿ ಕೊರೊನಾ ವೈರಸ್ ಹರಡಲು ವ್ಯವಸ್ಥಿತ ಸಂಚು ನಡೆಸಿದ್ದಕ್ಕೆ ಸಾಕ್ಷಿಗಳು ಒಂದೊಂದಾಗಿ ಎದ್ದು ಬರುತ್ತಿವೆ. ಜಗತ್ತಿನಾದ್ಯಂತ ಈ ಕಾಯಿಲೆ ಹಬ್ಬುತ್ತಿರುವ ಹೊತ್ತಿನಲ್ಲೇ, ಕೊರೊನಾ ವೈರಸ್ ಅನ್ನು ಅಲ್ಲಾಹುವೇ ಕಾಫಿರರ ನಿರ್ನಾಮಕ್ಕೆ ಕಳಿಸಿದ್ದು, ಇದರಿಂದ ಮುಸ್ಲಿಮರಿಗೆ ಅಪಾಯವಿಲ್ಲ ಎಂಬ ಹೇಳಿಕೆಗಳನ್ನು ಜನವರಿ ಎರಡನೇ ವಾರದಲ್ಲೇ ಶುರು ಮಾಡಿದ್ದರು’ ಎಂದು ಅವರು ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಭಾರತದಲ್ಲಿ ತಬ್ಲೀಗ್ ಪರ ಮಾತನಾಡುವವರು ತಬ್ಲೀಗಿಗಳ ಮುಖಂಡ, ಮೌಲಾನಾ ಸಾದ್ ಖಂಡಾಲ್ವಿ ದೆಹಲಿಯ ಮರ್ಕಜ್ ಕಾರ್ಯಕ್ರಮದಲ್ಲಿ ಮಾಡಿದ ಭಾಷಣಗಳ ಬಗ್ಗೆ ಚಕಾರವೆತ್ತುವುದಿಲ್ಲ! ಅಲ್ಲಿ ಕೊರೊನಾ ವೈರಸ್ ಮನುಷ್ಯರಿಗೆ ಹರಡುವ ಕಾಯಿಲೆ ಎಂಬುದನ್ನು ನಿರಾಕರಿಸಿ, ಅಂತರ ಕಾಯ್ದುಕೊಳ್ಳುವ ನೆಪದಲ್ಲಿ ಇಸ್ಲಾಮಿನ ಸುನ್ನಾಹ್ ಅನ್ನು ನಿಷೇಧಿಸಲಾಗುತ್ತಿದೆ ಎಂದು ವಿವರಿಸಲಾಗಿತ್ತು. ಧಾರ್ಮಿಕ ಉಪನ್ಯಾಸ ಮಾಡಬೇಕಾಗಿದ್ದ ಖಂಡಾಲ್ವಿ ಕೊರೊನಾ ಬಗ್ಗೆ ಮಾತನಾಡಿದ್ದಾರೆ.
ಪ್ರತಿಯೊಬ್ಬ ಮುಸ್ಲಿಮನ ಜೊತೆಗೆ 70ಸಾವಿರ ಯಕ್ಷರು ಇರುವುದರಿಂದ ಮುಸ್ಲಿಮರಿಗೆ ಅಪಾಯವಿಲ್ಲ ಅನ್ನುವ ರೀತಿ ಜನರನ್ನು ದಾರಿ ತಪ್ಪಿಸಿ, ಪರೋಕ್ಷವಾಗಿ ಪ್ರಾಣಾರ್ಪಣೆ ಮಾಡಲು ಸಿದ್ಧರಾಗಿ ಅಂತ ಪ್ರೇರೇಪಿಸಿದ್ದಾರೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಕೊರೊನಾ ಸೋಂಕು ಹರಡಲು ತಬ್ಲೀಗ್ ಮುಖ್ಯಸ್ಥರಿಗೆ ವಿದೇಶದಿಂದ ಹವಾಲಾ ಮೂಲಕ ದೊಡ್ಡ ಮೊತ್ತದ ಹಣ ಬಂದಿರುವುದು ಖಚಿತವಾಗಿದೆ. ಈ ಕುರಿತು ಜಾರಿ ನಿರ್ದೇಶನಾಲಯ ಮೌಲಾನಾ ವಿರುದ್ಧ ಕೇಸನ್ನೂ ದಾಖಲಿಸಿದೆ. ಇದರ ಹಿಂದೆ ಅಂತರರಾಷ್ಟ್ರೀಯ ಷಡ್ಯಂತ್ರ ಇದೆ. ಪಾಕಿಸ್ತಾನ ಸೇರಿದಂತೆ ಹಲವಾರು ಇಸ್ಲಾಮಿಕ್ ದೇಶಗಳ, ಇಸ್ಲಾಮಿಕ್ ಜಿಹಾದಿ ಸಂಘಟನೆಗಳ ಕೈವಾಡ ಇರುವುದು ಬೆಳಕಿಗೆ ಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.