ADVERTISEMENT

ಕರ್ನಾಟಕ ಜಾನಪದ ಅಕಾಡೆಮಿಯಿಂದ 30 ಸಾಧಕರಿಗೆ ವಾರ್ಷಿಕ ಗೌರವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 17:23 IST
Last Updated 10 ಏಪ್ರಿಲ್ 2022, 17:23 IST
   

ಹೊಸಪೇಟೆ (ವಿಜಯನಗರ): ‘ಮಾನಸಿಕ ಸ್ಥಿಮಿತಕ್ಕೆ ಜಾನಪದ ಔಷಧಿಯಿದ್ದಂತೆ. ಜಾನಪದ ಗೀತೆಗಳು ಮನಸಿನ ಭಾರ ಇಳಿಸುವ ಕೆಲಸ ಮಾಡುತ್ತವೆ. ಈ ಕಲೆ ಸದಾಕಾಲ ಉಳಿಯಬೇಕು’ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿ‌ಸಿದರು.

ಕರ್ನಾಟಕ ಜಾನಪದ ಅಕಾಡೆಮಿ, ಪ್ರವಾಸೋದ್ಯಮ ಇಲಾಖೆಯಿಂದ ಭಾನುವಾರ ರಾತ್ರಿ ನಗರದಲ್ಲಿ ಏರ್ಪಡಿಸಿದ್ದ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗೋಧಿಯನ್ನು ಒನಕೆಯಲ್ಲಿ ಕುಟ್ಟುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಜಾನಪದ ಕಲೆಗಳಿಗೆ ವಿಶಿಷ್ಟ ಸೊಗಡಿದೆ. ಅದನ್ನು ಉಳಿಸಿಕೊಂಡು ಬಂದಿರುವ ಕಲಾವಿದರಿಗೆ, ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ, ಅದರಲ್ಲೂ ನೂತನ ಜಿಲ್ಲೆಗೆ ಕರೆ ತಂದು ಗೌರವಿಸುತ್ತಿರುವುದು ಹೆಮ್ಮೆಯ ವಿಷಯ. ಮಂಜಮ್ಮ ಜೋಗತಿ ಅವರು ಸರ್ಕಾರದ ಮನವೊಲಿಸಿ ಕಾರ್ಯಕ್ರಮ ಸಂಘಟಿಸಿರುವುದು ಶ್ಲಾಘನಾರ್ಹ ಎಂದು ಕೊಂಡಾಡಿದರು.

ADVERTISEMENT

ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ. ಮಂಜಮ್ಮ ಜೋಗತಿ ಮಾತನಾಡಿ, ಕಲಾವಿದರಿಗೆ ಪ್ರಶಸ್ತಿ ಸಿಕ್ಕರೆ ನಿವೃತ್ತಿ ಅಂತ ತಿಳಿಯದೇ ಕಲೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಜೊತೆಗೆ ಮುಂದಿನ ಪೀಳಿಗೆಗೆ ನಮ್ಮ ಪರಂಪರೆ, ಕಲೆಯ ಮಹತ್ವ ತಿಳಿಸಿ ಉಳಿಸಿಕೊಂಡು ಹೋಗಲು ಪ್ರೇರೇಪಿಸಬೇಕು ಎಂದರು.

ಕೋವಿಡ್ ಕಾಲಘಟ್ಟದಲ್ಲಿ ಕಲಾವಿದರು ಅನುಭವಿಸಿದ ಸಂಕಷ್ಟಗಳನ್ನು ಕಣ್ಣಾರೆ ಕಂಡಿದ್ದೇನೆ. ಕಲೆ ಜೊತೆಗೊಂದು ಉಪಕಸುಬಿದ್ದರೆ ಆರ್ಥಿಕವಾಗಿ ಗಟ್ಟಿಯಾಗಬಹುದು ಎಂದು ಹೇಳಿದರು.
ಚಂದ್ರು ಕಾಳೇನಹಳ್ಳಿ, ಶ್ರೀಪಾದ ಶೆಟ್ಟಿ ಅವರಿಗೆ ತಜ್ಞ ಪ್ರಶಸ್ತಿ, ಚನ್ನಪ್ಪ ಕಟ್ಟಿ, ಸುರೇಶ ನಾಗಡಲಮಡಿಕೆ, ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ 2020ನೇ ಸಾಲಿನ ಪುಸ್ತಕ ಬಹುಮಾನ ವಿತರಿಸಲಾಯಿತು. ₹50,000 ನಗದು, ಪ್ರಶಸ್ತಿ ಫಲಕ ನೀಡಲಾಯಿತು. 30 ಜಿಲ್ಲೆಯ ಸಾಧಕರಿಗೆ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರಸಭೆ ಅಧ್ಯಕ್ಷೆ ಸುಂಕಮ್ಮ, ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್.ನಮ್ರತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.