ಮೈಸೂರು: ‘ಮತಾಂತರ ನಿಷೇಧ ಮಸೂದೆಯು ಆರ್ಎಸ್ಎಸ್ನ ಅಜೆಂಡಾವಲ್ಲದೆ ಬೇರೇನೂ ಅಲ್ಲ. ಆಡಳಿತ ಪಕ್ಷವೊಂದು ಹೀಗೆ ಕೀಳುಮಟ್ಟದ ಗಿಮಿಕ್ ಮಾಡುತ್ತಿರುವುದು ಸರಿಯಲ್ಲ’ ಎಂದು ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ ಪ್ರೊ.ಎಲ್.ಹನುಮಂತಯ್ಯ ಕಿಡಿಕಾರಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಬಲವಂತದಿಂದ ಎಷ್ಟು ಮಂದಿ ಮತಾಂತರ ಆಗಿದ್ದಾರೆ ಎಂಬ ಮಾಹಿತಿಯನ್ನು ಸರ್ಕಾರ ಜನರ ಮುಂದಿಡಲಿ. ಮುಸ್ಲಿಮರು, ಕ್ರೈಸ್ತರು ಮತ್ತು ಬೌದ್ಧರ ಜನಸಂಖ್ಯೆ ಎಷ್ಟು ಜಾಸ್ತಿ ಆಗಿದೆ? ಅದರಲ್ಲಿ ಎಷ್ಟು ಮಂದಿ ಬಲವಂತದ ಮತಾಂತರಕ್ಕೆ ಒಳಗಾಗಿದ್ದಾರೆ? ಆಮಿಷಕ್ಕೆ ಒಳಗಾಗಿ ದುಡ್ಡು ತೆಗೆದುಕೊಂಡವರು ಎಷ್ಟು? ಈ ಕುರಿತ ಅಂಕಿ–ಸಂಖ್ಯೆಗಳ ದಾಖಲೆಯನ್ನು ಸರ್ಕಾರ ಬಿಡುಗಡೆಗೊಳಿಸಬೇಕು’ ಎಂದು ಆಗ್ರಹಿಸಿದರು.
‘ದೇಶದಲ್ಲಿ ಕ್ರೈಸ್ತರ ಜನಸಂಖ್ಯೆ ಕಡಿಮೆಯಾಗಿದೆಯೇ ಹೊರತು, ಹೆಚ್ಚಾಗಿಲ್ಲ. 1951ರಲ್ಲಿ ಇದ್ದ ಜನಸಂಖ್ಯೆಗೆ ಹೋಲಿಸಿದರೆ ಶೇ 0.04 ರಷ್ಟು ಕಡಿಮೆಯಾಗಿದೆ. ಮತಾಂತರ ದೊಡ್ಡ ಪ್ರಮಾಣದಲ್ಲಿ ಆಗಿದ್ದರೆ ಜನಸಂಖ್ಯೆ ಇಮ್ಮಡಿಯಾಗಬೇಕಿತ್ತು. ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಟ್ಟು, ಜನರ ಗಮನ ಬೇರೆಡೆ ಸೆಳೆಯಲು ಕಾಯ್ದೆ ಜಾರಿಗೊಳಿಸುತ್ತಿದೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.