ಬೆಂಗಳೂರು: 'ತುರ್ತುಪರಿಸ್ಥಿತಿ ಸಂದರ್ಭದಲ್ಲಿ ನಾನೂ ಬಳ್ಳಾರಿ ಜೈಲಿನಲ್ಲಿ ಕೈದಿಯಾಗಿದ್ದೆ. ಆ ಸಂದರ್ಭದಲ್ಲಿ ಕುಡಿಕೆಯಲ್ಲಿ ಸಂಡಾಸ್ ಮಾಡಿ ಅದನ್ನು ಹೊರಗೆ ಎಸೆದು ಬರುವ ಹೀನಾಯ ಸ್ಥಿತಿಯನ್ನೂ ಎದುರಿಸಿದ್ದೆ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಅಲ್ಲಿದ್ದಾಗ ಜೈಲಿನ ಕೈದಿಗಳ ಪರಿಸ್ಥಿತಿ ಏನು ಎಂಬುದನ್ನು ಚೆನ್ನಾಗಿ ಅರಿತಿದ್ದೇನೆ. ಹೀಗಾಗಿ ಮಸೂದೆ ರೂಪಿಸುವಾಗ ಆ ಅನುಭವಗಳನ್ನು ಗಮನದಲ್ಲಿಟ್ಟುಕೊಂಡಿದ್ದೆ. ಇಂತಹ ಅನುಭವ ಕೊಟ್ಟಿದ್ದಕ್ಕೆ ಇಂದಿರಾಗಾಂಧಿಯವರಿಗೆ ಧನ್ಯವಾದ ಹೇಳಬೇಕು. ಬೇರೆ ರೀತಿಯ ಅಪರಾಧಕ್ಕಾಗಿ ಹೋಗಿದ್ದಲ್ಲ ಎಂದರು.
‘ಜೈಲಿನ ಅಧಿಕಾರಿಗಳು ಹೇಗಿರುತ್ತಾರೆ ಎಂಬುದಕ್ಕೆ ಮೊತ್ತೊಂದು ಘಟನೆ ನೆನಪಿಗೆ ಬರುತ್ತದೆ. ಒಮ್ಮೆ ನಮ್ಮ ಕಡೆಯವರು ಬಂಧನಕ್ಕೆ ಒಳಗಾಗಿದ್ದರು. ಅವರನ್ನು ಬಿಡಿಸಿಕೊಂಡು ಬರಲು ನಾವು ಒಂದು ಬಸ್ ಜನ ಹೋಗಿದ್ದೆವು. ಬಿಡುಗಡೆಗೆ ಮ್ಯಾಜಿಸ್ಟ್ರೇಟರು ಆದೇಶ ನೀಡಿದ್ದರು. ಆದರೆ, ಜೈಲು ಅಧಿಕಾರಿ ಬಿಡಲು ಒಪ್ಪಲಿಲ್ಲ. ಬಳಿಕ ಯಾರೋ ಹೇಳಿದರು, ಆತ ಹಣ ಕೊಡದೇ ಬಿಡುವುದಿಲ್ಲ ಎಂದು. ಆಗ ನನ್ನ ಬಳಿ ಇದ್ದದ್ದು ₹8,000 ಮಾರನೇ ದಿನದವರೆಗೆ ಕಾಯುವ ಸ್ಥಿತಿ ಇರಲಿಲ್ಲ. ಆ ಹಣವನ್ನು ಅವರ ಎದೆಯ ಮೇಲೆ ಹಾಕಿ ಬಿಡಿಸಿಕೊಂಡು ಬಂದೆವು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.