ADVERTISEMENT

ದೇಶಕ್ಕೆ ಮೂರುನಾಮ: ಕೇಂದ್ರದ ವಿರುದ್ಧ ಸಾಹಿತಿ ಅರವಿಂದ ಮಾಲಗತ್ತಿ ಟೀಕೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 19:45 IST
Last Updated 2 ಫೆಬ್ರುವರಿ 2020, 19:45 IST
ಬಹುಜನ ವಿದ್ಯಾರ್ಥಿ ಸಂಘವು ಮೈಸೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಿಧಾನ ಜಾಗೃತಿ ಸಮಾವೇಶದಲ್ಲಿ ಸಾವಿತ್ರಿ ಬಾ ಫುಲೆ ಅವರ ಭಾವಚಿತ್ರಕ್ಕೆ ಸಾಲುಮರದ ತಿಮ್ಮಕ್ಕ ಪುಷ್ಪಾರ್ಚನೆ ಮಾಡಿದರು. ಶಾಸಕ ಎನ್.ಮಹೇಶ್, ಸಾಹಿತಿ ಅರವಿಂದ ಮಾಲಗತ್ತಿ, ಚಿಂತಕ ಸಿ.ಎಸ್.ದ್ವಾರಕನಾಥ್ ಇದ್ದಾರೆ
ಬಹುಜನ ವಿದ್ಯಾರ್ಥಿ ಸಂಘವು ಮೈಸೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಿಧಾನ ಜಾಗೃತಿ ಸಮಾವೇಶದಲ್ಲಿ ಸಾವಿತ್ರಿ ಬಾ ಫುಲೆ ಅವರ ಭಾವಚಿತ್ರಕ್ಕೆ ಸಾಲುಮರದ ತಿಮ್ಮಕ್ಕ ಪುಷ್ಪಾರ್ಚನೆ ಮಾಡಿದರು. ಶಾಸಕ ಎನ್.ಮಹೇಶ್, ಸಾಹಿತಿ ಅರವಿಂದ ಮಾಲಗತ್ತಿ, ಚಿಂತಕ ಸಿ.ಎಸ್.ದ್ವಾರಕನಾಥ್ ಇದ್ದಾರೆ   

ಮೈಸೂರು: ಕೇಂದ್ರ ಸರ್ಕಾರವು ದೇಶಕ್ಕೆ ‘ಸಿಎಎ’, ‘ಎನ್‌ಆರ್‌ಸಿ’ ಹಾಗೂ ‘ಎನ್‌ಪಿಆರ್’ ರೂಪದಲ್ಲಿ ಮೂರುನಾಮಗಳನ್ನು ಹಾಕಿದೆ ಎಂದು ಸಾಹಿತಿ ಅರವಿಂದ ಮಾಲಗತ್ತಿ ಹರಿಹಾಯ್ದರು.

ಬಹುಜನ ವಿದ್ಯಾರ್ಥಿ ಸಂಘವು (ಬಿವಿಎಸ್‌) ಭಾನುವಾರ ಇಲ್ಲಿ ಏರ್ಪಡಿಸಿದ್ದ ಸಂವಿಧಾನ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನಾಥೂರಾಂ ಗೋಡ್ಸೆ ಚಿಂತನೆ ಅಳವಡಿಸಿಕೊಂಡಿರುವ ಕೇಂದ್ರ ಸರ್ಕಾರವು ಸಂವಿಧಾನದೊಳಗೆ ಮರಿಮನುಸ್ಮೃತಿಯನ್ನು ಅಳವಡಿಸಲು ಹುನ್ನಾರ ನಡೆಸಿದೆ. ನಾವೆಲ್ಲರೂ ಸೈನಿಕರಂತೆ ಸಂವಿಧಾನವನ್ನು ರಕ್ಷಿಸಬೇಕಿದೆ’ ಎಂದು ಹೇಳಿದರು.

ADVERTISEMENT

‌ಚಿಂತಕ ಸಿ.ಎಸ್.ದ್ವಾರಕನಾಥ್ ಮಾತನಾಡಿ, ‘ಕೆಲವು ಚಿತ್ಪಾಲ ಬ್ರಾಹ್ಮಣರು ಮಹಾತ್ಮ ಗಾಂಧಿಯನ್ನು ಕೊಲ್ಲುವಂತಹ ತಂತ್ರ ಹೆಣೆದ ನಾಗಪುರದ ಕ್ಯಾಂಪಿನಿಂದಲೇ ಈ ‘ಸಿಎಎ’ ಸೂತ್ರ ರಚಿಸಲಾಗಿದೆ. ‘ಇವನಾರವ, ಇವನಾರವ’ ಎಂದು ಕೇಳುವ ಮೂಲಕ ಇದು ಸಂವಿಧಾನದ ಆಶಯಗಳಿಗೆ ಮಾತ್ರವಲ್ಲ, ಬಸವಣ್ಣನವರ ತತ್ವಗಳಿಗೂ ವಿರುದ್ಧವಾದುದು’ ಎಂದರು.

‘ಸಂಸದರಿಗಾಗಿ ಸಂವಿಧಾನ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು. ಇವರಿಗೆಂದೇ ₹ 1 ಕೋಟಿ ಮೌಲ್ಯದ ಬಹುಮಾನ ನೀಡಲು ಭಿಕ್ಷೆ ಎತ್ತಿಯಾದರೂ ತರುತ್ತೇನೆ’ ಎಂದು ಲೇವಡಿ ಮಾಡಿದರು.‌

ಶಾಸಕ ಮಹೇಶ್ ಮಾತನಾಡಿ, ಕಾಂಗ್ರೆಸ್‌ ಹಾಗೂ ಕಮ್ಯುನಿಸ್ಟರು ಸಾಮಾನ್ಯರಲ್ಲ. ಇವರು ಹಾಗೂ ಬಿಜೆಪಿ ದೇಶದಲ್ಲಿ ‘ಸಿವಿಲ್ ವಾರ್’
ಯೋಜಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ. ಆದರೆ, ನಾವು ಮಾತ್ರ ಶಾಂತಿಯುತವಾಗಿ ಹೋರಾಟ ನಡೆಸೋಣ’ ಎಂದು ಕರೆ ನೀಡಿದರು.

ಬಿವಿಎಸ್‌ ವತಿಯಿಂದ ಪರಿಸರವಾದಿ ಸಾಲುಮರದ ತಿಮ್ಮಕ್ಕ ಅವರಿಗೆ ₹ 1 ಲಕ್ಷ ಪುರಸ್ಕಾರ ವಿತರಿಸಲಾಯಿತು.

₹ 5 ಲಕ್ಷ ಬಹುಮಾನ: ಸಂವಿಧಾನ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ₹ 5 ಲಕ್ಷ ಮೌಲ್ಯದ ಬಹುಮಾನ ನೀಡಲಾಯಿತು.

ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಕಾರ್ಕಳದ ಮಹಮ್ಮದ್ ರಿಯಾಜ್ ಅವರಿಗೆ ₹ 1 ಲಕ್ಷ, ಪಿಯು ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ತುಮಕೂರಿನ ಚಂದನಾ ಅವರಿಗೆ ₹ 50 ಸಾವಿರ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ ಟಿ.ಎಸ್.ಇಂಪನಾ ಅವರಿಗೆ ₹ 25 ಸಾವಿರ ಬಹುಮಾನ ನೀಡಲಾಯಿತು. ಒಟ್ಟು 31,969 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.