ADVERTISEMENT

ಈ ವರ್ಷ ಅಡಿಕೆಗೆ ಕೊಳೆ ರೋಗ ಇಲ್ಲ: ಕೇಂದ್ರ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 15:40 IST
Last Updated 16 ಡಿಸೆಂಬರ್ 2025, 15:40 IST
ಅಡಿಕೆ ಕೊಯ್ಲಿನಲ್ಲಿ ತೊಡಗಿರುವ ಕಾರ್ಮಿಕರು
ಅಡಿಕೆ ಕೊಯ್ಲಿನಲ್ಲಿ ತೊಡಗಿರುವ ಕಾರ್ಮಿಕರು   

ನವದೆಹಲಿ: ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಕೇಂದ್ರೀಯ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು ನಡೆಸಿದ ಸಮೀಕ್ಷೆಗಳ ಪ್ರಕಾರ, 2025–26ನೇ ಸಾಲಿನಲ್ಲಿ ಕರ್ನಾಟಕದ ಮಲೆನಾಡು ಭಾಗದಲ್ಲಿ ಅಡಿಕೆ ಮರಗಳಲ್ಲಿ ಹಳದಿ ಎಲೆ ರೋಗ, ಎಲೆ ಚುಕ್ಕೆ ರೋಗ ಹಾಗೂ ಕೊಳೆ ರೋಗದ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವ ರಾಮನಾಥ್‌ ಠಾಕೂರ್‌ ಸ್ಪಷ್ಟಪಡಿಸಿದ್ದಾರೆ. 

ಲೋಕಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ. ಸಮೀಕ್ಷೆಗಳ ಪ್ರಕಾರ, 2022-23 ರಿಂದ 2024-25 ರ ಅವಧಿಯಲ್ಲಿ ಈ ಮೂರು ರೋಗದ ಕುರುಹುಗಳು ಕಂಡು ಬಂದಿದ್ದವು ಎಂದು ಅವರು ವಿವರ ನೀಡಿದ್ದಾರೆ. 

ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ ಹಳದಿ ಎಲೆ ರೋಗದಿಂದಾಗಿ ₹136 ಕೋಟಿ ಹಾಗೂ ಕೊಳೆ ರೋಗದಿಂದ ₹160 ಕೋಟಿ ಹಾನಿ ಆಗಿದೆ ಎಂದು ಅವರು ತಿಳಿಸಿದ್ದಾರೆ. 

ADVERTISEMENT

ಎಲೆ ಚುಕ್ಕೆ ರೋಗ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು 2024-25 ರಲ್ಲಿ ಕರ್ನಾಟಕ ರಾಜ್ಯ ತೋಟಗಾರಿಕಾ ಮಿಷನ್‌ಗೆ ₹37 ಕೋಟಿ ಮಂಜೂರು ಮಾಡಿತ್ತು. 2025-26ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಮೂಲಕ ₹8.6 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.