ADVERTISEMENT

ಆಡಿಯೊ ಪ್ರಕರಣ: ‘ತಪ್ಪು ನಡೆದುಹೋಗಿದೆ–ಹಗರಣ ಕೈಬಿಡಿ’– ಮಾಧುಸ್ವಾಮಿ ಮನವಿ

ವಿಧಾನಸಭಾಧ್ಯಕ್ಷರಿಗೆ ಮಾಧುಸ್ವಾಮಿ ಮನವಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 2:03 IST
Last Updated 13 ಫೆಬ್ರುವರಿ 2019, 2:03 IST
ಮಾಧುಸ್ವಾಮಿ
ಮಾಧುಸ್ವಾಮಿ   

ಬೆಂಗಳೂರು: ‘ತಪ್ಪು ನಡೆದುಹೋಗಿದೆ. 224 ಶಾಸಕರೂ ನಿಮ್ಮಮೇಲೆ ವಿಶ್ವಾಸ ಇಟ್ಟಿದ್ದೇವೆ. ಈ ಹಗರಣ ಕೈಬಿಡಿ. ಇಲ್ಲವೇ ಹಗರಣದ ತನಿಖೆಯನ್ನುಸದನ ಸಮಿತಿ ಅಥವಾ ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸಿ’ ಎಂದು ಬಿಜೆಪಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಅವರಿಗೆ ಮನವಿ ಮಾಡಿದರು.

ಅಧಿವೇಶನದಲ್ಲಿ ಮಾತನಾಡಿದ ಅವರು, ‘ತನಿಖೆಯ ಹೊಣೆಯನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಒಪ್ಪಿಸಿದರೆ ಮೂಲ ಉದ್ದೇಶಕ್ಕೆ ಪೆಟ್ಟು ಬೀಳಲಿದೆ. ಆರಂಭದಲ್ಲಿ ಎಫ್‌ಐಆರ್ ದಾಖಲಿಸಬೇಕು. ಬಳಿಕ ಸಮನ್ಸ್‌ ನೀಡಬೇಕು. ಒಂದು ವೇಳೆ ಶಾಸಕರಿಗೆ ಸಮನ್ಸ್‌ ನೀಡಿದರೆ ಅವರು ಬರಲು ನಿರಾಕರಿಸಬಹುದು. ಅವರು ಕೋರ್ಟ್‌ನಿಂದ ಜಾಮೀನು ತರಲು ಅವಕಾಶ ಇದೆ’ ಎಂದರು.

‘ತನಿಖಾ ದಳದವರು ದೋಷಾರೋಪ ಪಟ್ಟಿಯನ್ನು ಸರ್ಕಾರಕ್ಕೆ ಅಥವಾ ವಿಧಾನಸಭಾಧ್ಯಕ್ಷರಿಗೆ ಸಲ್ಲಿಸುವುದಿಲ್ಲ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಒಂದು ವೇಳೆ ಪ್ರಕರವನ್ನು ಎಸ್‌ಐಟಿಗೆ ಒಪ್ಪಿಸಿದರೆ ಅನಗತ್ಯವಾಗಿ ಅಸ್ತ್ರ ನೀಡಿ ನಮ್ಮನ್ನು ಬಲಿ ಹಾಕುವ ಕೆಲಸ ಆಗಲಿದೆ’ ಎಂದರು.

ADVERTISEMENT

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಸ್‌ಐಟಿ ರಚನೆ ಮಾಡಿದ್ದರು. ಅದರ ಬಗ್ಗೆ ಎಚ್‌.ಡಿ.ಕುಮಾರಸ್ವಾಮಿ ಅವರು ಟೀಕೆ ಮಾಡಿದ್ದರು. ಈ ಪ್ರಕರಣ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಎಸ್‌ಐಟಿ ತನಿಖೆಯಿಂದ ಯಾವ ಸಾಧನೆಯೂ ಆಗುವುದಿಲ್ಲ. ಶೇ 60ರಷ್ಟು ಶಾಸಕರು ಪೊಲೀಸ್‌ ಕಿರುಕುಳಕ್ಕೆ ಒಳಗಾಗಿದ್ದಾರೆ. ಎಸ್‌ಐಟಿ ಜತೆಗೆ ಸ್ನೇಹವೂ ಒಳ್ಳೆಯದಲ್ಲ, ದ್ವೇಷವೂ ಉತ್ತಮವಲ್ಲ’ ಎಂದು ಪ್ರತಿಪಾದಿಸಿದರು.

* ವಿಧಾನಸಭೆಯ ಬಾಗಿಲು ಒದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರನ್ನು ಕರೆಸಿ ವಿಚಾರಣೆ ಮಾಡಲು ಆಗುತ್ತದೆಯೇ?

- ಜೆ.ಸಿ.ಮಾಧುಸ್ವಾಮಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.