ADVERTISEMENT

ಸೆಪ್ಟೆಂಬರ್ 23ರೊಳಗೆ ವಿಧಾನಸಭಾ ಅಧಿವೇಶನ: ಸಭಾಧ್ಯಕ್ಷರಿಂದ ವ್ಯವಸ್ಥೆಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 11:51 IST
Last Updated 6 ಆಗಸ್ಟ್ 2020, 11:51 IST
   

ಬೆಂಗಳೂರು:ಕಳೆದ ಮಾರ್ಚ್‍ನಲ್ಲಿ ರಾಜ್ಯ ವಿಧಾನಸಭಾ ಅಧಿವೇಶನವು ನಡೆದಿದ್ದು, ಸಂವಿಧಾನಬದ್ದವಾಗಿ ಆರು ತಿಂಗಳ ಒಳಗೆ ಅಂದರೆ ಸೆಪ್ಟೆಂಬರ್ 23 ರೊಳಗೆ ಮತ್ತೊಮ್ಮೆ ಸಮಾವೇಶಗೊಳ್ಳಬೇಕಿದೆ. ಹೀಗಾಗಿ ಸದನದಲ್ಲಿ ರಾಜ್ಯ ಸಚಿವ ಸಂಪುಟದ ಸದಸ್ಯರು ಮತ್ತು ಸದನದ ಸದಸ್ಯರು, ಸದನದಲ್ಲಿ ಹಾಜರಿರುವ ಅಧಿಕಾರಿಗಳು ಹಾಗೂ ಮಾಧ್ಯಮದವರ ಆರೋಗ್ಯಕ್ಕೆ ಕೋವಿಡ್-19 ರ ಸೋಂಕು ತಗುಲದಂತೆ ಕ್ರಮ ವಹಿಸುವುದು ಹೇಗೆ? ಎಂಬುದರ ಕುರಿತು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರುಇಂದು ಸದನದಲ್ಲಿನ ವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಕೋವಿಡ್-19 ರ ಉಪಟಳ ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭಾ ಅಧಿವೇಶನವನ್ನು ನಡೆಸುವುದು ಹೇಗೆ ? ಎಂಬ ಬಗ್ಗೆವಿವಿಧ ಸ್ತರಗಳಲ್ಲಿ ವಿಸ್ತೃತ ಚರ್ಚೆಗಳು ನಡೆಯುತ್ತಿವೆ. ರಾಜ್ಯದ ರಾಜಧಾನಿಯ ವಿಧಾನಸೌಧ ಹೊರತುಪಡಿಸಿ ಬೇರೆಲ್ಲಾದರೂ ಅಧಿವೇಶನ ನಡೆಸಲು ಸೂಕ್ತ ಸ್ಥಳ ಇದೆಯೇ? ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ವಿಧಾನ ಸೌಧದ ಮೊದಲನೇಯ ಮಹಡಿಯಲ್ಲಿರುವ ವಿಧಾನ ಸಭಾ ಸಭಾಂಗಣದಲ್ಲಿ ಪ್ರಸ್ತುತ ಇರುವ ಆಸನ ವ್ಯವಸ್ಥೆಗಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗಾಜಿನ ಕವಚಗಳನ್ನು ಅಳವಡಿಸಿದರೆ ಹೇಗೆ? ಸದನಕ್ಕೆ ಆಗಮಿಸುವ ಮುಖ್ಯಮಂತ್ರಿಗಳೂ ಒಳಗೊಂಡಂತೆ ಅವರ ಸಂಪುಟದ ಎಲ್ಲಾ ಸದಸ್ಯರು, ಪ್ರತಿಪಕ್ಷ ನಾಯಕರೂ ಒಳಗೊಂಡಂತೆ ಸದನದ ಎಲ್ಲಾ ಸದಸ್ಯರೂ ಅಧಿವೇಶನವು ನಡೆಯುವ ದಿನಗಳಂದು ಕಡ್ಡಾಯವಾಗಿ ಮುಖಗವಸು ಒದಗಿಸುವುದು ಹಾಗೂ ಮುಖ ರಕ್ಷಕಗಳನ್ನು ಧರಿಸಿಬರಬೇಕೆಂದು ವಿನಂತಿಸುವುದರ ಬಗ್ಗೆ ಅಧಿಕಾರಿಗಳು ತಮಗೆ ಸಲಹೆ ನೀಡಿದ್ದಾರೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪರಿಶೀಲನೆ ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದರು.

ADVERTISEMENT

ಲೋಕಸಭೆ ಮತ್ತು ರಾಜ್ಯ ಸಭೆ ಹಾಗೂ ಇತರೆ ರಾಜ್ಯಗಳಲ್ಲಿನ ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಸಮಾವೇಶಗೊಳ್ಳಲು ಹೇಗೆ ಸಿದ್ದತೆಗಳನ್ನು ನಡೆಸುತ್ತಿವೆ? ಎಂಬುದರ ಬಗ್ಗೆಯೂ ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ಹೇಳಿದರು.

ಮುಂದಿನ ವಾರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿ ಸ್ಥಳ ನಿಷ್ಕರ್ಷೆ ಮಾಡುವುದಾಗಿಯೂ ಸಭಾಧ್ಯಕ್ಷರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.