ADVERTISEMENT

ಮಾ.4ರಿಂದ ಅಧಿವೇಶನ; ‘ಒಂದು ರಾಷ್ಟ್ರ– ಒಂದು ಚುನಾವಣೆ’ ಎರಡು ದಿನ ಚರ್ಚೆ

‘ಒಂದು ರಾಷ್ಟ್ರ– ಒಂದು ಚುನಾವಣೆ’ ಎರಡು ದಿನ ಚರ್ಚೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 20:28 IST
Last Updated 2 ಮಾರ್ಚ್ 2021, 20:28 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ   

ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಮಾರ್ಚ್‌ 4 ರಿಂದ 19 ದಿನ ನಡೆಯಲಿದೆ. ಮೊದಲ ಎರಡು ದಿನ ‘ಒಂದು ರಾಷ್ಟ್ರ– ಒಂದು ಚುನಾವಣೆ’ ಕುರಿತು ಚರ್ಚೆ ನಡೆಯಲಿದೆ.ಮಾರ್ಚ್ 8 ರಂದು ಬಜೆಟ್‌ ಮಂಡನೆಯಾಗಲಿದೆ.

‘ಗುಜರಾತ್‌ನ ಕೆವಾಡಿಯಾದಲ್ಲಿ ನಡೆದಿದ್ದ ಸ್ಪೀಕರ್‌ಗಳ ಸಮ್ಮೇಳನದ ನಿರ್ಣಯದಂತೆ ‘ಒಂದು ರಾಷ್ಟ್ರ– ಒಂದು ಚುನಾವಣೆ’ ಕುರಿತು ಚರ್ಚಿಸಲು ಸಮಯ ನಿಗದಿ ಮಾಡಲಾಗಿದೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ವಿಧಾನಪರಿಷತ್ತಿನಲ್ಲೂ ಈ ಕುರಿತು ಎರಡು ದಿನಗಳ ಚರ್ಚೆ ನಡೆಯಲಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಈ ಅಧಿವೇಶನದಲ್ಲಿ ಕರ್ನಾಟಕ ಪೌರಸಭೆಗಳ ಮಸೂದೆ–2021, ಸೊಸೈಟಿಗಳ ನೋಂದಣಿ ಮಸೂದೆ–2021 ಮತ್ತು ಲೇವಾದೇವಿದಾರರ ನೋಂದಣಿ ಮಸೂದೆ–2021ರ ಮಂಡನೆ ಆಗಲಿದೆ. ಪ್ರಶ್ನೋತ್ತರ ಸೇರಿ ಎಲ್ಲ ಕಲಾಪಗಳಿಗೂ ಸಮಯ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ಕೋವಿಡ್‌ ಕಾರಣದಿಂದ ಕೆಲವು ತಿಂಗಳುಗಳಿಂದ ಸಾರ್ವಜನಿಕರಿಗೆ ವಿಧಾನಸಭೆಯ ಕಲಾಪ ವೀಕ್ಷಿಸಲು ಅವಕಾಶ ನೀಡಿರಲಿಲ್ಲ. ಈ ಬಾರಿ ಗ್ಯಾಲರಿಯಲ್ಲಿ ಅಂತರ ಕಾಯ್ದುಕೊಂಡು ಸಾರ್ವಜನಿಕರಿಗೂ ಕಲಾಪ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ ಕಲಾಪ ವೀಕ್ಷಣೆಗೆ ನಿರ್ಬಂಧ ಮುಂದುವರಿಯಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.