ADVERTISEMENT

ಮೀಸಲಾತಿ ತ್ಯಾಗ ಮಾಡಲಿ: ಸ್ಥಿತಿವಂತ ಪರಿಶಿಷ್ಟರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 18:35 IST
Last Updated 4 ಮಾರ್ಚ್ 2020, 18:35 IST

ಬೆಂಗಳೂರು: ಹಲವು ತಲೆಮಾರುಗಳಿಂದ ಮೀಸಲಾತಿ ಸೌಲಭ್ಯ ಪಡೆದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ (ಕೆನೆಪದರ) ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರು, ತಮ್ಮ ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೆ ಆ ಸೌಲಭ್ಯವನ್ನು ಬಿಟ್ಟುಕೊಡಬೇಕು ಎಂದು ಜೆಡಿಎಸ್‌ ಸದಸ್ಯ ಎ.ಟಿ.ರಾಮಸ್ವಾಮಿ ಸಲಹೆ ನೀಡಿದರು.

ವಿಧಾನಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಐಎಎಸ್‌ ಅಧಿಕಾರಿಯೊಬ್ಬರ ಮಕ್ಕಳು ಮೀಸಲಾತಿ ಅಡಿಯೇ ಎಂಬಿಬಿಎಸ್‌, ಎಂಡಿ ಸೀಟು ಪಡೆದುಕೊಂಡಿದ್ದಾರೆ. ಇವರು ತಮ್ಮ ಸಮುದಾಯದ ಸವಲತ್ತು ವಂಚಿತರಿಗೆ ತ್ಯಾಗ ಮಾಡಬೇಕಿತ್ತು ಎಂದರು.

ಕೆನೆ ಪದರದಲ್ಲಿರುವವರ ಮಕ್ಕಳು ಜತೆ ಗ್ರಾಮಾಂತರ ಪ್ರದೇಶದ ಕಡು ಬಡವ ದಲಿತ ಮಕ್ಕಳು ಸ್ಪರ್ಧೆ ಮಾಡಲು ಸಾಧ್ಯವಿದೆಯೇ. ಈ ಬಗ್ಗೆ ಎಲ್ಲರೂ ಮುಕ್ತ ಮನಸ್ಸಿನಿಂದ ಚಿಂತನೆ ನಡೆಸಬೇಕು ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಮೀಸಲಾತಿ ರದ್ದು ಮಾಡಿ ಎನ್ನುತ್ತಿಲ್ಲ. ಉಳ್ಳವರೇ ಸೌಲಭ್ಯವನ್ನು ಮತ್ತೆ ಮತ್ತೆ ಪಡೆಯುತ್ತಿರುವುದರಿಂದ ವಂಚಿತರು ಸದಾ ವಂಚಿತರಾಗಿ ಉಳಿಯುವಂತಾಗಿದೆ. ಇದು ಪರಿಶಿಷ್ಟರಿಗೆ ಮಾತ್ರವಲ್ಲ ಎಲ್ಲ ವರ್ಗಗಳಿಗೂ ಅನ್ವಯವಾಗುತ್ತದೆ’ ಎಂದು ರಾಮಸ್ವಾಮಿ ತಿಳಿಸಿದರು.

ರಾಮಸ್ವಾಮಿಯವರ ವಾದ ಒಪ್ಪದ ಜೆಡಿಎಸ್‌ನ ಕೆ. ಅನ್ನದಾನಿ, ಇದರಲ್ಲಿ ಸರ್ಕಾರದ ವೈಫಲ್ಯವಿದೆ. ಸರ್ಕಾರ ಕಟ್ಟ ಕಡೆಯವನಿಗೂ ಮೀಸಲು ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.