ದಾವಣಗೆರೆ:ಐದು ಮಂದಿ ದೇವದಾಸಿಯರ ಜಡ್ಡುಗಟ್ಟಿದ ಜಡೆಯನ್ನು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಶನಿವಾರ ಕತ್ತರಿಸುವ ಮೂಲಕ ಅನಿಷ್ಟ ಪದ್ಧತಿ ವಿರುದ್ಧ ಜಾಗೃತಿ ಮೂಡಿಸಿದರು.
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಇಲ್ಲಿನ ಶಿವಯೋಗ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೇವದಾಸಿ ಮಹಿಳೆಯರ ಮೌಢ್ಯಾಚರಣೆ ನಿವಾರಣೆ ಜಾಗೃತಿ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಯಿತು.
‘ಹಿಂದೆ ಕತ್ತರಿಸಿದ್ದರೂ ಮತ್ತೆ ಜಡೆ ಬಂದಿದೆ. ಅದು ದೇವಿಯ ಕೃಪೆ’ ಎಂದು ರತ್ಮಮ್ಮ ಹೇಳಿದಾಗ, ‘ಅದು ದೇವಿಯ ಕೃಪೆಯಲ್ಲ. ದಿನಾ ಸೋಪು ಹಾಕಿ ಸ್ನಾನ ಮಾಡಿ. ಬಳಿಕ ಚೆನ್ನಾಗಿ ತಲೆ ಬಾಚಿಕೊಳ್ಳಿ’ ಎಂದು ಸ್ವಾಮೀಜಿ ಸಲಹೆ ನೀಡಿದರು.
‘ದೇವರು ಕೊಟ್ಟಿರುವುದು’ ಎಂದು ಮತ್ತೆ ರತ್ನಮ್ಮ ಹಠ ಹಿಡಿದು ಹೇಳಿದರು. ‘ಯಾವ ದೇವಸ್ಥಾನದ ದೇವ, ದೇವಿಯರೂ ಬಂದು ಮಾತನಾಡಲ್ಲ. ನಮ್ಮಂಥ ಗುರುಗಳನ್ನೇ ನೀವು ದೇವರೆಂದು ತಿಳಿದಿದ್ದೀರಿ ತಾನೆ. ನಮ್ಮ ಮಾತನ್ನೇ ದೇವರ ಮಾತು ಎಂದು ತಿಳಿಯಿರಿ. ನಿಮ್ಮ ಕೂದಲನ್ನೇ ನಿರ್ವಹಣೆ ಮಾಡಲು ಆಗಿಲ್ಲ ಅಂದರೆ ಜೀವನ ನಿರ್ವಹಣೆ ಹೇಗೆ ಮಾಡುತ್ತೀರಿ’ ಎಂದು ಪ್ರಶ್ನಿಸಿದರು.
‘ಅನಿವಾರ್ಯವಾಗಿ ದೇವದಾಸಿಯರಾಗಿದ್ದೀರಿ. ಇದರಿಂದ ಹೊರಬಂದರೆ ನಿಮ್ಮ ಬದುಕು ಉತ್ತಮಗೊಳಿಸಲು ಸರ್ಕಾರದ ಯೋಜನೆಗಳ ಜತೆಗೆ ನಾನೂ ಸಹಕಾರ ನೀಡುವೆ’ ಎಂದು ಭರವಸೆ ನೀಡಿದರು. ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಎಚ್. ವಿಜಯಕುಮಾರ್, ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಜೆ. ಮೋಕ್ಷಪತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.