ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವಂತೆ ಕರಾವಳಿಯಿಂದಲೇ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದ ವಿಎಚ್ಪಿ ಹಾಗೂ ಆರ್ಎಸ್ಎಸ್, ಈ ಬಾರಿ ಮತ್ತೊಮ್ಮೆ ಕರಾವಳಿಯಲ್ಲಿ ಬೈಠಕ್ ನಡೆಸುವ ಮೂಲಕ ರಾಮ ಮಂದಿರ ನಿರ್ಮಾಣ ರೂಪುರೇಷೆಗಳನ್ನು ಸಿದ್ಧಪಡಿಸುವ ಚಿಂತನೆಯಲ್ಲಿದೆ.
ಡಿಸೆಂಬರ್ನಲ್ಲಿ ರಾಷ್ಟ್ರೀಯ ಬೈಠಕ್ ನಡೆಸಲು ಚಿಂತನೆ ಮಾಡಲಾಗಿದ್ದು, ನಗರದ ಸಂಘನಿಕೇತನದಲ್ಲಿ ದೇಶದ ನಾನಾ ಭಾಗಗಳಿಂದ ಆರ್ಎಸ್ಎಸ್ನ ಪ್ರಚಾರಕರು, ವಿಎಚ್ಪಿ ಪ್ರಮುಖರು ಭಾಗವಹಿಸಲಿದ್ದಾರೆ. ಈ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಕರಾವಳಿಯಿಂದಲೇ ಸ್ಪಷ್ಟ ಯೋಜನೆಗಳನ್ನು ರೂಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಆರ್ಎಸ್ಎಸ್ ಸರಕಾರ್ಯವಾಹ ಸುರೇಶ ಭೈಯ್ಯಾಜಿ ಜೋಷಿ ಮಾರ್ಗದರ್ಶನದಲ್ಲಿ ನಡೆಯಲಿರುವ ಬೈಠಕ್ನಲ್ಲಿ ಮಂದಿರ ನಿರ್ಮಾಣಕ್ಕೆ ಅಗತ್ಯವಿರುವ ಯೋಜನೆಗಳನ್ನು ಶೀಘ್ರದಲ್ಲಿ ಅನುಷ್ಠಾನಗೊಳಿಸುವಂತೆ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸಾಧ್ಯತೆಗಳು ದಟ್ಟವಾಗಿವೆ.
‘ನಗರದಲ್ಲಿ ವಿಎಚ್ಪಿ ಬೈಠಕ್ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಬೈಠಕ್ನಲ್ಲಿ ಯಾವೆಲ್ಲ ವಿಷಯಗಳು ಚರ್ಚೆಯಾಗಲಿವೆ ಎಂಬುದನ್ನು ಹಿರಿಯರು ನಿರ್ಧರಿಸಲಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಬಂದಿರುವುದರಿಂದ ಈ ಬಾರಿಯ ಬೈಠಕ್ನಲ್ಲಿ ಅಯೋ ಧ್ಯೆಯ ರಾಮಮಂದಿರ ನಿರ್ಮಾಣದ ಕುರಿತು ವಿಸ್ತೃತ ಚರ್ಚೆ ಆಗುವ ಸಾಧ್ಯತೆ ಗಳು ಇವೆ’ ಎಂದು ವಿಶ್ವ ಹಿಂದೂ ಪರಿಷತ್ನ ಜಗದೀಶ್ ಶೇಣವ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.