ADVERTISEMENT

ಕೃಷಿ ಸಂಬಂಧಿ ಕಾಯ್ದೆಗಳ ಪರಿಶೀಲನೆ; ಸಮಿತಿ ಪುನರ್‌ ರಚಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 16:49 IST
Last Updated 15 ಜನವರಿ 2021, 16:49 IST
ಪ್ರೊ.ಬಿ.ಕೆ.ಚಂದ್ರಶೇಖರ್‌
ಪ್ರೊ.ಬಿ.ಕೆ.ಚಂದ್ರಶೇಖರ್‌   

ಬೆಂಗಳೂರು: ಕೃಷಿ ಸಂಬಂಧಿ ಕಾಯ್ದೆಗಳ ಪರಿಶೀಲನೆಗಾಗಿ ಸುಪ್ರೀಂಕೋರ್ಟ್‌ ರಚಿಸಿರುವ ಸಮಿತಿಯಲ್ಲಿ ಒಂದೇ ನಿಲುವಿನ ನಾಲ್ವರು ಸದಸ್ಯರಿದ್ದು, ಸಮಿತಿಯನ್ನು ಪುನರ್‌ ರಚಿಸಬೇಕು ಎಂದು ಕೆಪಿಸಿಸಿ ವಕ್ತಾರ ಪ್ರೊ.ಬಿ.ಕೆ. ಚಂದ್ರಶೇಖರ್‌ ಆಗ್ರಹಿಸಿದ್ದಾರೆ.

ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕಾಯ್ದೆಗಳ ಕುರಿತು ಪರಿಶೀಲನೆಗೆ ಸಮಿತಿ ನೇಮಿಸುವ ಸುಪ್ರೀಂಕೋರ್ಟ್‌ ನಿರ್ಧಾರ ಸ್ವಾಗತಾರ್ಹವಾದುದು. ಆದರೆ, ಸೂಕ್ಷ್ಮತೆಯುಳ್ಳ ಯಾರೂ ಈ ಸಮಿತಿಯ ಎದುರು ಹಾಜರಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸುವುದು ಕಷ್ಟ. ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿ, ಕಾಯ್ದೆಗಳನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿರುವವರನ್ನೇ ಸಮಿತಿಯ ಸದಸ್ಯರನ್ನಾಗಿ ಮಾಡಿರುವುದು ಇದಕ್ಕೆ ಕಾರಣ’ ಎಂದು ಹೇಳಿದ್ದಾರೆ.

ಸಮಿತಿಯ ನೇತೃತ್ವ ವಹಿಸಲು ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಲೋಧಾ ನಿರಾಕರಿಸಿದ್ದಾರೆ. ಭೂಪಿಂದರ್‌ ಸಿಂಗ್‌ ಮಾನ್‌ ಸಮಿತಿಯ ಸದಸ್ಯತ್ವವನ್ನೇ ನಿರಾಕರಿಸಿದ್ದಾರೆ. ಇದು ಒಂದು ‘ಸ್ವತಂತ್ರ ಸಮಿತಿ’ ಅಲ್ಲ ಎಂಬುದು ಮನದಟ್ಟಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ನ್ಯಾಯಾಲಯದ ಮುಂದೆ ಈಗ ಎರಡು ಆಯ್ಕೆಗಳಿವೆ. ಮೊದಲನೆಯದಾಗಿ ಈ ಕಾಯ್ದೆಗಳ ಕುರಿತು ಈವರೆಗೂ ಯಾವುದೇ ನಿಲುವು ತಾಳದ ವ್ಯಕ್ತಿಗಳನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಬಹುದು. ಇಲ್ಲವೇ, ವಿಶ್ವಾಸಾರ್ಹ ವ್ಯಕ್ತಿಯೊಬ್ಬರಿಗೆ ಸಮಿತಿಯ ನೇತೃತ್ವ ವಹಿಸಿ, ಪರ ಮತ್ತು ವಿರುದ್ಧ ಇರುವ ತಲಾ ಇಬ್ಬರನ್ನು ಸದಸ್ಯರನ್ನಾಗಿ ನೇಮಿಸಬಹುದು ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.