ಸುವರ್ಣ ವಿಧಾನಸೌಧ (ಬೆಳಗಾವಿ): ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವಂತೆ (ಬಗರ್ ಹುಕುಂ) ಕೋರಿ ಸಲ್ಲಿಕೆಯಾಗಿದ್ದ 2.23 ಲಕ್ಷ ಅರ್ಜಿಗಳನ್ನು ಈವರೆಗೆ ತಿರಸ್ಕರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಧೀರಜ್ ಮುನಿರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ನಮೂನೆ–50, ನಮೂನೆ–53 ಮತ್ತು ನಮೂನೆ–57ರ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು 20 ಮಾನದಂಡಗಳ ಆಧಾರದಲ್ಲಿ ಪರಿಶೀಲಿಸಲಾಗುತ್ತಿದೆ. ಅನರ್ಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಸಲ್ಲಿಕೆಯಾಗಿದ್ದ 42,350 ಅರ್ಜಿಗಳ ಪೈಕಿ, 33,499 ಅರ್ಜಿಗಳನ್ನು ತಿರಸ್ಕರಿಸಲಾಗಿದೆ’ ಎಂದರು.
ರಾಜ್ಯದಲ್ಲಿ ತಿರಸ್ಕೃತವಾಗಿರುವ ಅರ್ಜಿಗಳ ಕುರಿತು ಮಾಹಿತಿ ಪಡೆಯಲಾಗಿದೆ. 18 ವರ್ಷ ವಯಸ್ಸಾಗದ 7,000ಕ್ಕೂ ಹೆಚ್ಚು ಜನರು ಸಲ್ಲಿಸಿರುವ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಕೆರೆ, ರಸ್ತೆ, ಗುಂಡುತೋಪು, ದೇವರಕಾಡು ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವುದಾಗಿ ಸಲ್ಲಿಸಿದ್ದ 27,452 ಅರ್ಜಿಗಳು, ನಗರ ಮತ್ತು ಪಟ್ಟಣಗಳ ಬಫರ್ ವಲಯದ ವ್ಯಾಪ್ತಿಯಲ್ಲಿ ಸಾಗುವಳಿ ಮಾಡುತ್ತಿರುವುದಾಗಿ ಸಲ್ಲಿಸಿದ್ದ 33,000 ಅರ್ಜಿಗಳು, ಅರಣ್ಯ ಜಮೀನಿಗೆ ಸಂಬಂಧಿಸಿದ 12,000 ಅರ್ಜಿಗಳನ್ನೂ ತಿರಸ್ಕರಿಸಲಾಗಿದೆ ಎಂದು ವಿವರಿಸಿದರು.
ಕೃಷಿಕರೇ ಅಲ್ಲದವರು, ಅರ್ಜಿಯಲ್ಲಿ ಉಲ್ಲೇಖಿಸಿದ ಜಮೀನುಗಳಲ್ಲಿ ಸಾಗುವಳಿಯನ್ನೇ ಮಾಡದವರು, ಕುಟುಂಬದಲ್ಲಿ 5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರು ಸಲ್ಲಿಸಿರುವ ಅರ್ಜಿಗಳನ್ನೂ ತಿರಸ್ಕರಿಸಲಾಗಿದೆ ಎಂದರು.
10,651 ಖಾತೆ ಬಾಕಿ: ಕಾಂಗ್ರೆಸ್ನ ಟಿ.ಬಿ. ಜಯಚಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು, ‘ಬಗರ್ ಹುಕುಂ ಸಾಗುವಳಿ ಸಮಿತಿಗಳ ನಿರ್ಣಯದಂತೆ ಭೂ ಮಂಜೂರಾತಿಯಾಗಿರುವ 10,651 ಪ್ರಕರಣಗಳಲ್ಲಿ ಈವರೆಗೂ ರೈತರ ಹೆಸರಿಗೆ ಖಾತೆ ಮಾಡದಿರುವುದು ಕಂಡುಬಂದಿದೆ’ ಎಂದು ವಿಧಾನಸಭೆಗೆ ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ 2,749, ಹಾಸನ ಜಿಲ್ಲೆಯಲ್ಲಿ 2,679, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,527 ಮತ್ತು ರಾಮನಗರ ಜಿಲ್ಲೆಯಲ್ಲಿ 1,144 ಪ್ರಕರಣಗಳಲ್ಲಿ ಇನ್ನೂ ಖಾತೆಯಾಗಿಲ್ಲ ಎಂದು ಮಾಹಿತಿ ನೀಡಿದರು.
ಜಂಟಿ ಸರ್ವೆಯ ಭರವಸೆ: ಬಿಜೆಪಿಯ ಆರಗ ಜ್ಞಾನೇಂದ್ರ ಮಾತನಾಡಿ, ‘ರಾಜ್ಯದಲ್ಲಿ ಈಗ ರೂಪಿಸಿರುವ ಬಗರ್ ಹುಕುಂ ಭೂ ಮಂಜೂರಾತಿ ನಿಯಮಗಳು ಜಟಿಲವಾಗಿವೆ. ಅಧಿಕಾರಿಗಳೇ ಎಲ್ಲ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ. ಕಂದಾಯ– ಅರಣ್ಯ ಜಮೀನು ಜಂಟಿಯಾಗಿರುವ ಸರ್ವೆ ನಂಬರ್ಗಳಲ್ಲಿ ಜಂಟಿ ಸರ್ವೆ ಪೂರ್ಣಗೊಳ್ಳದಿದ್ದರೂ ಅರಣ್ಯದ ನೆಪದಲ್ಲಿ ಅರ್ಜಿ ತಿರಸ್ಕರಿಸಲಾಗುತ್ತಿದೆ’ ಎಂದು ದೂರಿದರು.
‘ಕಂದಾಯ– ಅರಣ್ಯ ಜಮೀನುಗಳು ಒಂದೇ ಸರ್ವೆ ನಂಬರ್ಗಳಲ್ಲಿ ಇದ್ದು, ಜಂಟಿ ಸರ್ವೆ ನಡೆಸಿ ಗಡಿ ಗುರುತಿಸದ ಪ್ರಕರಣಗಳಿದ್ದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ. ತಕ್ಷಣವೇ ಜಂಟಿ ಸರ್ವೆ ನಡೆಸಲು ಕ್ರಮ ಕೈಗೊಳ್ಳುವೆ’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.