ಬೆಂಗಳೂರು:ಶಿವಮೊಗ್ಗದ ಬಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆಗೆ ಸಂಚು ರೂಪಿಸಲು ಸಹಕರಿಸಿದ ಆರೋಪ ಎದುರಿಸುತ್ತಿರುವ ಪ್ರಕರಣದ ಹತ್ತನೇ ಆರೋಪಿಯ ಜಾಮೀನು ಅರ್ಜಿಯನ್ನುರಾಷ್ಟ್ರೀಯ ತನಿಖಾ ದಳದ (ಎನ್ಐಎ) ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ಜಾಮೀನು ಕೋರಿ ಶಿವಮೊಗ್ಗದ ವಾದಿ ಎ ಹುದಾ ನಗರದ ವಾಸಿಯಾದ 50 ವರ್ಷದ ಜಾಫರ್ ಸಾದಿಕ್ ಬಿನ್ ಅಬ್ದುಲ್ ಸತ್ತಾರ್ ಸಲ್ಲಿಸಿದ್ದ ಅರ್ಜಿಯನ್ನು ಎನ್ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಗಂಗಾಧರ ಅವರು ಮಾನ್ಯ ಮಾಡಲು ನಿರಾಕರಿಸಿದ್ದಾರೆ.
‘ನನ್ನನ್ನು ತಪ್ಪಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಾನು ನಿರಪರಾಧಿ ನನಗೆ ಜಾಮೀನು ನೀಡಬೇಕು’ ಎಂದು ಕೋರಿ ಜಾಫರ್ ಸಾದಿಕ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಅಕ್ಷೇಪಣೆ ಸಲ್ಲಿಸಿದ್ದ ಎನ್ಐಎ ಪರ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್, ‘ಆರೋಪಿಯ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಇರುವ ಕಾರಣ ಜಾಮೀನು ನೀಡಬಾರದು‘ ಎಂದು ಕೋರಿದ್ದರು.
ಪ್ರಾಸಿಕ್ಯೂಷನ್ ಆಕ್ಷೇಪಣೆಯನ್ನು ಮಾನ್ಯ ಮಾಡಿರುವ ನ್ಯಾಯಾಧೀಶರು, ‘ಆರೋಪಿಯು ಕೃತ್ಯದಲ್ಲಿ ಭಾಗಿಯಾಗಿ ರುವ ಬಗ್ಗೆ ಮೇಲ್ನೋಟಕ್ಕೇ ಸಾಕಷ್ಟು ಪುಷ್ಟಿ ನೀಡುವಂತಿದೆ. ಹತ್ಯೆಯಾಗಿರುವ ಹರ್ಷ, ಗೋರಕ್ಷಣೆ ಮತ್ತು ಹಿಂದುತ್ವದ ಪ್ರತಿಪಾದನೆಯ ಕಟ್ಟಾ ಕಾರ್ಯಕರ್ತ ನಾಗಿದ್ದುದನ್ನು ಸಹಿಸದೆ ಹತ್ಯೆ ನಡೆಸ ಲಾಗಿದೆ ಎಂದು ತನಿಖಾಧಿಕಾರಿಗಳು ವಿವರಿಸಿದ್ದಾರೆ. ಹತ್ಯೆಗೂ ಮುನ್ನಜಾಫರ್ ತನ್ನ ಐ–20 ಕಾರನ್ನು ಉಳಿದ ಆರೋಪಿಗಳಿಗೆ ಸಂಚು ರೂಪಿಸಲು ಮಂಡಗದ್ದೆಗೆ ಕಳುಹಿಸಿಕೊಟ್ಟಿರುವ ಬಗ್ಗೆ ಪುರಾವೆ ಕಂಡು ಬರುತ್ತಿದೆ’ ಎಂದು ಆದೇಶದಲ್ಲಿ ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.