ರಾಮನಗರ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾಕತ್ತಿದ್ದರೆ ಚೀನಾ ಉತ್ಪನ್ನಗಳ ಆಮದನ್ನು ನಿಲ್ಲಿಸಲಿ ಎಂದು ಸಂಸದ ಡಿ.ಕೆ. ಸುರೇಶ್ ಸವಾಲು ಹಾಕಿದರು.
ಶುಕ್ರವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು 'ಚೀನಾ ಉತ್ಪನ್ನಗಳನ್ನು ನಿಷೇಧಿಸುವ ಅಧಿಕಾರ ಪ್ರಧಾನಿಗೆ ಇದೆ. ಅವರು ಕ್ರಮಕ್ಕೆ ಮುಂದಾದಲ್ಲಿ ಕಾಂಗ್ರೆಸ್ ಸಹಕಾರ ನೀಡಲಿದೆ' ಎಂದರು.
ಬಿಜೆಪಿ ಕಾರ್ಯಕರ್ತರು ಚೀನಾ ಮೇಲೆ ಯುದ್ಧ ಮಾಡಬೇಕು. ಇಲ್ಲವೇ ಚೀನಾ ವಸ್ತುಗಳ ಖರೀದಿಯನ್ನು ನಿಲ್ಲಿಸಿಬಿಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿರುವುದು ಸಮಂಜಸವಲ್ಲ. ಆ ಅಧಿಕಾರ ಸರ್ಕಾರದ ಬಳಿಯೇ ಇದೆ. ಸರ್ಕಾರವೇ ತೀರ್ಮಾನ ಕೈಗೊಳ್ಳಲಿ ಎಂದರು.
ದೇಶದಲ್ಲಿ ಮೇಕ್ ಇನ್ ಇಂಡಿಯಾ, ಸ್ವದೇಶಿ ಚಳವಳಿ ಹೆಸರಿನಲ್ಲಿ ಕೇವಲ ಪ್ರಚಾರ ಪಡೆಯಲಾಗುತ್ತಿದೆ. ಇಲ್ಲಿನ ನಿರುದ್ಯೋಗ ಸಮಸ್ಯೆ ಬಗ್ಗೆ ಗಮನ ಹರಿಸಿಲ್ಲ. ಭಾರತೀಯರ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ ವಿದೇಶಿ ಉತ್ಪನ್ನ ಆಮದು ನಿಲ್ಲಿಸಿ ಇಲ್ಲಿಯೇ ಉತ್ಪಾದನೆ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರಧಾನಿಗೆ ಈಗ ಬುದ್ದಿ ಬಂದಿದ್ದು, ಹಳೆಯ ಸ್ನೇಹಿತ ರಷ್ಯಾ ಜೊತೆ ಈಗ ಮಾತುಕತೆಗೆ ಇಳಿದಿದೆ. ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು ಎಂದರು.
ರಾಮನಗರ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ವೈದ್ಯರಿಗೂ ಸೋಂಕು ತಗುಲಿರುವುದು ದುರದೃಷ್ಟಕರ. ವರ್ತಕರು, ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಸೀಲ್ಡೌನ್ ಮಾಡಿದ್ದಾರೆ. ಅಧಿಕಾರಿಗಳಿಗೆ ಅಗತ್ಯ ಸಲಹೆ ನೀಡಿದ್ದೇನೆ. ಈ ಬಗ್ಗೆ ಭಾನುವಾರ ನಾನೂ ಸಭೆ ನಡೆಸಲಿದ್ದೇನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.