ADVERTISEMENT

ಬಳಕೆದಾರರ ಶುಲ್ಕ ಇಳಿಕೆ ಅನುಮಾನ?

ಶುಲ್ಕ ಕಡಿತಗೊಳಿಸದಂತೆ ಕೆಐಎ ಆಡಳಿತ ಮಂಡಳಿ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2018, 18:46 IST
Last Updated 2 ಆಗಸ್ಟ್ 2018, 18:46 IST

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಬಳಕೆದಾರರ ಶುಲ್ಕವನ್ನು ಇಳಿಕೆ ಮಾಡದಂತೆ ಆಡಳಿತ ಮಂಡಳಿಯು ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರಕ್ಕೆ (ಎಇಆರ್‌ಎ) ಪ್ರಸ್ತಾವ ಸಲ್ಲಿಸಿದೆ.

ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದ್ದು, ಶುಲ್ಕ ಸಂಗ್ರಹದಿಂದ ಆದಾಯ ಹೆಚ್ಚಳವಾಗಿದೆ. ಹೀಗಾಗಿ, ಬಳಕೆದಾರರ ಶುಲ್ಕ ಕಡಿತ ಮಾಡುವಂತೆ ಏರ್‌ಲೈನ್ಸ್ ಬಳಕೆದಾರರ ಸಲಹಾ ಸಮಿತಿ (ಎಯುಸಿಸಿ) ಸಭೆಯಲ್ಲಿ ಕೆಲ ಸದಸ್ಯರು ಆಗ್ರಹಿಸಿದ್ದರು.ಎಇಆರ್‌ಎಗೆ ಮನವಿ ಸಲ್ಲಿಸಿದ್ದು, ಅದು ಪರಿಶೀಲನಾ ಹಂತದಲ್ಲಿದೆ.

‘ಭವಿಷ್ಯದ ದೃಷ್ಟಿಯಿಂದ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ. ಆದಾಯ ಹೆಚ್ಚಾದಂತೆ ನಿಲ್ದಾಣದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು. ಬಳಕೆದಾರರ ಶುಲ್ಕವನ್ನು ಕಡಿತ ಮಾಡದೆ, ಮುಂದಿನ ಎರಡೂವರೆ ವರ್ಷಗಳವರೆಗೆ ಸದ್ಯದ ಶುಲ್ಕವನ್ನೇ ಮುಂದುವರಿಸುವಂತೆ ಕೋರಿ ಎಇಆರ್‌ಎಗೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ವಿಮಾನ ನಿಲ್ದಾಣದ ಕಾರ್ಯಾಚರಣೆ ಅಧ್ಯಕ್ಷ ಮತ್ತು ಸಿಇಒ ಹರಿ ಮರಾರ್‌ ತಿಳಿಸಿದರು.

ADVERTISEMENT

‘ನಿಲ್ದಾಣದಲ್ಲಿ ಶೇ 74ರಷ್ಟು ಖಾಸಗಿ ಸಂಸ್ಥೆಗಳ ಪಾಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಸ್ಥೆಗಳು ಶೇ 26ರಷ್ಟು ಪಾಲು ಹೊಂದಿದೆ. ಒಂದೇ ಸಂಸ್ಥೆಗೆ ಎಲ್ಲ ಆದಾಯ ಹೋಗುವುದಿಲ್ಲ’ ಎಂದರು.

ಸುರಂಗ ಮಾರ್ಗ: ‘ಬಳ್ಳಾರಿ ರಸ್ತೆಗೆ ಪರ್ಯಾಯವಾಗಿ ಮತ್ತೊಂದು ರಸ್ತೆ ನಿರ್ಮಿಸಲಾಗಿದೆ.ಅದೇ ರಸ್ತೆಯಿಂದ 2ನೇ ರನ್‌ವೇ ದಾಟಿಕೊಂಡು 1ನೇ ಟರ್ಮಿನಲ್ ಮತ್ತು ಪಾರ್ಕಿಂಗ್‌ ಸ್ಥಳದ ಕಡೆಗೆ ಹೋಗಲು ಸುರಂಗ ಮಾರ್ಗದ ಅವಶ್ಯಕತೆ ಇದೆ. ₹1,200 ಕೋಟಿ ವೆಚ್ಚದಲ್ಲಿ ಅದನ್ನು ನಿರ್ಮಿಸುವ ಯೋಜನೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.