ADVERTISEMENT

'ಕಾಶ್ಮೀರ ಮುಕ್ತಿ' ಭಿತ್ತಿಪತ್ರ ಪ್ರದರ್ಶನ: ಅಮೂಲ್ಯಾ ಬೆನ್ನಲ್ಲೇ ಆರ್ದ್ರಾ ಜೈಲಿಗೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 22:21 IST
Last Updated 21 ಫೆಬ್ರುವರಿ 2020, 22:21 IST
ಪುರಭವನ ಎದುರು ಭಿತ್ತಿಪತ್ರ ಪ್ರದರ್ಶಿಸಿದ ಯುವತಿಯನ್ನು ಎಸ್‌.ಜೆ.ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು 
ಪುರಭವನ ಎದುರು ಭಿತ್ತಿಪತ್ರ ಪ್ರದರ್ಶಿಸಿದ ಯುವತಿಯನ್ನು ಎಸ್‌.ಜೆ.ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು    

ಬೆಂಗಳೂರು: ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದ ಅಮೂಲ್ಯಾ ಲಿಯೋನಾ (19) ‘ದೇಶ ದ್ರೋಹ’ ಆರೋಪದಡಿ ಪರಪ್ಪನ ಅಗ್ರಹಾರ ಜೈಲು ಸೇರಿದ ಬೆನ್ನಲ್ಲೇ ‘ಕಾಶ್ಮೀರ ಮುಕ್ತಿ’ ಭಿತ್ತಿಪತ್ರ ಪ್ರದರ್ಶಿಸಿದ ಅನ್ನಪೂರ್ಣ ಅಲಿಯಾಸ್ ಆರ್ದ್ರಾ (24) ಎಂಬುವವರನ್ನು ಬಂಧಿಸಿದ ಎಸ್‌.ಜೆ. ಪಾರ್ಕ್ ಠಾಣೆ ಪೊಲೀಸರು, ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅಮೂಲ್ಯಾ ವಿರುದ್ಧ ವಿವಿಧ ಹಿಂದೂಪರ ಸಂಘಟನೆಗಳು ಪುರಭವನ ಎದುರು ಶುಕ್ರವಾರ ಬೆಳಿಗ್ಗೆ ಪ್ರತಿಭಟನೆ ಹಮ್ಮಿಕೊಂಡಿದ್ದವು. ಅಲ್ಲಿಗೆ ಬಂದಿದ್ದ ಆರ್ದ್ರಾ, ‘ಮುಸಲ್ಮಾನ್, ದಲಿತ, ಕಾಶ್ಮೀರಿ, ಟ್ರಾನ್ಸ್, ಆದಿವಾಸಿ ಮುಕ್ತಿ ಮುಕ್ತಿ ಮುಕ್ತಿ’ ಎಂಬ ಬರೆದಿದ್ದ ಭಿತ್ತಿಪತ್ರ
ಪ್ರದರ್ಶಿಸಿದರು. ಗಮನಿಸಿ ಪ್ರತಿಭಟನಕಾರರು ಯುವತಿ ನಡೆ ಪ್ರಶ್ನಿಸಿದರು. ಇದೇ ವೇಳೆ ಪರಸ್ಪರ ವಾಗ್ವಾದ ನಡೆದಿದ್ದು, ಮಧ್ಯಪ್ರವೇಶಿಸಿದ ಪೊಲೀಸರು ಯುವತಿ ಬಂಧಿಸಿ ಠಾಣೆಗೆ ಕರೆದೊಯ್ದರು.

ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಧೀಶರ ಎದುರು ಶುಕ್ರವಾರ ಸಂಜೆ ಯುವತಿ
ಯನ್ನು ಹಾಜರುಪಡಿಸಲಾಯಿತು. ನ್ಯಾಯಾಧೀಶರು, ಯುವತಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದರು. ಅಮೂಲ್ಯಾ, ಆರ್ದ್ರಾ ಸ್ನೇಹಿತೆಯರು ಎಂಬುದು ತನಿಖೆಯಿಂದ ಗೊತ್ತಾಗಿದೆ.

ADVERTISEMENT

ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ್‌ಗೌಡ, ‘ಯುವತಿ ಭಿತ್ತಿಪತ್ರವನ್ನಷ್ಟೇ ಪ್ರದರ್ಶಿಸಲಿಲ್ಲ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆಕೂಗಿದ್ದಾರೆ. ದೂರು ನೀಡಿದ್ದೇವೆ’ ಎಂದರು.

‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಕ್ಕೆ ಪುರಾವೆ ಇಲ್ಲ’ ಎಂದಿರುವ ಕೇಂದ್ರ ವಿಭಾಗದ ಡಿಸಿಪಿ ಚೇತನ್‌ಸಿಂಗ್‌ ರಾಥೋಡ್, ‘ಯುವತಿ ಕೈಯಲ್ಲಿದ್ದ ಭಿತ್ತಿಪತ್ರ ಜಪ್ತಿ ಮಾಡಿದ್ದೇವೆ. ದೂರು ದಾಖಲಿಸಿಕೊಳ್ಳಲಾಗಿದೆ’ ಎಂದರು.

ಜೈಲಿಗೆ ಅಮೂಲ್ಯಾ: ಅಮೂಲ್ಯಾ ಅವರನ್ನು ಗುರುವಾರ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಹಿಸುತ್ತಿದ್ದಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಯಾರು ಈ ಆರ್ದ್ರಾ?
‘ಆರ್ದ್ರಾ ಖಾಸಗಿ ಕಂಪನಿ ಉದ್ಯೋಗಿ. ಪೋಷಕರು ಸದ್ಯ ಮಲ್ಲೇಶ್ವರದಲ್ಲಿ ನೆಲೆಸಿದ್ದಾರೆ. ಕಂಪನಿಯ ಕಚೇರಿ ದೂರವಾಗುತ್ತದೆ ಎಂಬ ಕಾರಣಕ್ಕೆ ಸಿ.ವಿ. ರಾಮನ್‌ ನಗರದ ಪಿ.ಜಿಯಲ್ಲಿ (ಪೇಯಿಂಗ್ ಗೆಸ್ಟ್) ಆರ್ದ್ರಾ ಉಳಿದುಕೊಂಡಿದ್ದರು. ಆಗಾಗ ಮನೆಗೆ ಹೋಗಿ ಬರುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರ್ದ್ರಾ ಮನೆ ಎದುರು ಶುಕ್ರವಾರ ಮಧ್ಯಾಹ್ನ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಸ್ಥಳಕ್ಕೆ ಬಂದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್, ಪ್ರತಿಭಟನೆಗೆ ಅವಕಾಶ ನೀಡಲಿಲ್ಲ. ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಅಮೂಲ್ಯಾ ಮನೆ ಮೇಲೆ ಕಲ್ಲು
ಕೊಪ್ಪ ತಾಲ್ಲೂಕಿನ ಗುಬ್ಬಗದ್ದೆಯಲ್ಲಿನ ಅಮೂಲ್ಯ ಲಿಯೋನ್‌ ಮನೆ ಮೇಲೆ ಕೆಲವರು ಗುರುವಾರ ರಾತ್ರಿ ಕಲ್ಲು ತೂರಿದ್ದಾರೆ. ಕಿಟಕಿ ಗಾಜುಗಳು ಒಡೆದಿವೆ.

ಮನೆ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 9ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಮೂಲ್ಯಾ ವರ್ತನೆ ಖಂಡಿಸಿ ಚಿಕ್ಕಮಗಳೂರು, ಕೊಪ್ಪ ಸೇರಿದಂತೆ ವಿವಿಧೆಡೆಗಳಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆಗಳು ನಡೆಸಿದವು.

ಕೊಪ್ಪ ತಾಲ್ಲೂಕಿನ ಗುಬ್ಬಗದ್ದೆಯಲ್ಲಿನ ಅಮೂಲ್ಯ ಲಿಯೋನ್‌ ಮನೆ ಮೇಲೆ ಕೆಲವರು ಗುರುವಾರ ರಾತ್ರಿ ಕಲ್ಲು ತೂರಿದ್ದಾರೆ. ಕಿಟಕಿ ಗಾಜುಗಳು ಒಡೆದಿವೆ.

ಮನೆ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 9ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಮೂಲ್ಯಾ ವರ್ತನೆ ಖಂಡಿಸಿ ಚಿಕ್ಕಮಗಳೂರು, ಕೊಪ್ಪ ಸೇರಿದಂತೆ ವಿವಿಧೆಡೆಗಳಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆಗಳು ನಡೆಸಿದವು.

*
ಪಾಕ್ಪರ ಘೋಷಣೆ ಕೂಗಿದ ಯುವತಿಗೆ ನಕ್ಸಲರ ಜತೆ ಸಂಬಂಧ ಇದ್ದಿದ್ದು ಹಿಂದೆ ಸಾಬೀತಾಗಿತ್ತು.ಸಂಘಟಕರನ್ನು ತನಿಖೆ ನಡೆಸಿದರೆ ಆಕೆಗೆ ಪ್ರೇರಣೆ ಕೊಟ್ಟಿರುವುದು ಯಾರೆಂದು ಗೊತ್ತಾಗಲಿದೆ.
-ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.