ADVERTISEMENT

ಬೆಂಗಳೂರು ಸಚಿವರು, ಜನಪ್ರತಿನಿಧಿಗಳ ಸಭೆ: ಕಠಿಣ ನಿಯಮ ಇಂದು ಪ್ರಕಟ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 21:33 IST
Last Updated 19 ಏಪ್ರಿಲ್ 2021, 21:33 IST
   

ಬೆಂಗಳೂರು: ಬೆಂಗಳೂರು ನಗರ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಕಠಿಣ ನಿಯಮಾವಳಿಯನ್ನು ಮಂಗಳವಾರ ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ಚರ್ಚಿಸಿ ಬಳಿಕ ಪ್ರಕಟಿಸಲಿದ್ದಾರೆ.

ಬೆಂಗಳೂರು ಸಚಿವರು ಮತ್ತು ಜನಪ್ರತಿನಿಧಿಗಳ ಸಭೆಯ ಬಳಿಕ ಕಂದಾಯ ಸಚಿವ ಆರ್‌.ಅಶೋಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ತಜ್ಞರು ನೀಡಿರುವ ವರದಿಯನ್ನು ಆಧರಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಲಾಗಿದೆ. ನಾಳೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷಗಳ ನಾಯಕರ ಸಭೆ ನಡೆಯಲಿದೆ. ಆ ಬಳಿಕ ಕಟ್ಟುನಿಟ್ಟಿನ ನಿಯಮವನ್ನು ಪ್ರಕಟಿಸಲಿದ್ದಾರೆ ಎಂದು ಅಶೋಕ ಹೇಳಿದರು.

ADVERTISEMENT

ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು

* ವೈದ್ಯಕೀಯ ಆಮ್ಲಜನಕದ ಅಗತ್ಯ ಇರುವವರಿಗೆ ಮಾತ್ರ ಆಸ್ಪತ್ರೆ ಸೇರಿಸಲು ವ್ಯವಸ್ಥೆ. ಈಗ ಅಗತ್ಯ ಇಲ್ಲದವರೂ ಆಸ್ಪತ್ರೆಗೆ ದಾಖಲಾಗಿರುವುದರಿಂದ ಹಾಸಿಗೆ ಸಮಸ್ಯೆ ಉಂಟಾಗಿದೆ. ಕೋವಿಡ್‌ ಸೋಂಕಿತರನ್ನು ಮೊದಲಿಗೆ ಕೋವಿಡ್‌ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗುವುದು. ಉಸಿರಾಟದ ಸಮಸ್ಯೆ ಬಂದರೆ ಮಾತ್ರ ಅವರನ್ನು ಆಸ್ಪತ್ರೆಗೆ ಸೇರಿಸಲಾಗುವುದು.

* ರೆಮ್‌ಡಿಸಿವಿರ್‌ ಇಂಜೆಕ್ಷನ್‌ ಕೊರತೆ ಇಲ್ಲ. 20 ಸಾವಿರ ದಾಸ್ತಾನು ಇದೆ. ಇದರ ಅವಶ್ಯಕತೆ ಇಲ್ಲದವರೂ ಖರೀದಿಸುತ್ತಿರುವುದರಿಂದ ಸಮಸ್ಯೆ ಆಗಿದೆ. ಸರ್ಕಾರದ ಆಸ್ಪತ್ರೆಯಲ್ಲಿ ದಾಸ್ತಾನು ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರತೆ ಇದೆ. ಖಾಸಗಿ ಆಸ್ಪತ್ರೆಗಳಿಗೂ ಪೂರೈಕೆ ಮಾಡಲಾಗುವುದು.

* ಸಾವಿನ ಪ್ರಮಾಣ ಹೆಚ್ಚಾದರೆ ಬಯಲಿನಲ್ಲಿ ಕಟ್ಟಿಗೆ ಮೂಲಕ ಶವದಹನ ಮಾಡಲು ವ್ಯವಸ್ಥೆ. ಕೋವಿಡ್‌ನಿಂದ ಮೃತಪಟ್ಟವರ ಶವಗಳನ್ನು ಏಕಕಾಲಕ್ಕೆ ಆಸ್ಪತ್ರೆಗಳು ಬಿಡುಗಡೆ ಮಾಡುತ್ತಿರುವುದರಿಂದ ವಿದ್ಯುತ್‌ ಚಿತಾಗಾರಗಳಲ್ಲಿ ಒತ್ತಡ ಉಂಟಾಗಿದೆ. ಏಕ ಕಾಲಕ್ಕೆ ಬಿಡುಗಡೆ ಮಾಡುವುದಕ್ಕೆ ಬದಲು, ಬೆಳಗ್ಗಿನಿಂದ ಶವಗಳನ್ನು ಅಂತ್ಯ ಸಂಸ್ಕಾರಕ್ಕೆ ಬಿಡುಗಡೆ ಮಾಡಲು ಆಸ್ಪತ್ರೆಗಳಿಗೆ ಸೂಚನೆ ನೀಡಲಾಗುವುದು.

* ಶವಗಳನ್ನು ಸಾಗಿಸಲು 49 ಆಂಬ್ಯುಲೆನ್ಸ್‌ಗಳನ್ನು ಮೀಸಲಿಡಲಾಗಿದೆ. ಅಲ್ಲದೆ, ವಿದ್ಯುತ್‌ ಚಿತಾಗಾರಗಳು 24 ಗಂಟೆ ಕಾರ್ಯ ನಿರ್ವಹಿಸಲಿವೆ. ಕೋವಿಡ್‌ನಿಂದ ಮೃತಪಟ್ಟವರ ಶವ ಸಾಗಿಸಲು ಹಣ ಪಡೆಯುವಂತಿಲ್ಲ.

* 24x 7 ಕಾರ್ಯನಿರ್ವಹಿಸಲು ಕೋವಿಡ್‌ ನಿಯಂತ್ರಣ ಕೊಠಡಿಯ ಉಸ್ತುವಾರಿಯನ್ನು ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳಿಗೆ ವಹಿಸಲಾಗುವುದು.

* ಖಾಸಗಿ ಆಸ್ಪತ್ರೆಗಳು ಇನ್ನೂ ಸುಮಾರು ಆರರಿಂದ ಏಳು ಸಾವಿರ ಹಾಸಿಗೆಗಳನ್ನು ನೀಡಬೇಕು. ಅದಕ್ಕಾಗಿ ಸಭೆ ನಡೆಸಿದ್ದೇವೆ.

* ವಾರಾಂತ್ಯದ ಲಾಕ್‌ಡೌನ್‌ ಬಗ್ಗೆ ಪ್ರಸ್ತಾಪ ಆಗಿಲ್ಲ. ಲಾಕ್‌ಡೌನ್‌ ಬೇಡ ಎಂದು ಸಭೆಯಲ್ಲಿ ಎಲ್ಲರೂ ಹೇಳಿದ್ದಾರೆ.

* ಕೋವಿಡ್‌ ಇಡೀ ವಿಶ್ವದಲ್ಲಿ ಹರಡಿದೆ. ನಾವು ಇಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಕಮ್ಯುನಿಷ್ಟ್‌ ಎಂದು ಕೂತರೆ ಆಗುವುದಿಲ್ಲ. ಎಲ್ಲರೂ ಸೇರಿ ನಿಭಾಯಿಸಬೇಕಾಗಿದೆ. ಎಲ್ಲ ರಾಜಕಾರಣಿಗಳೂ ಸೇರಿ ನಿಭಾಯಿಸಿ ಬೆಂಗಳೂರು ಮಾದರಿ ಎಂಬುದನ್ನು ತೋರಿಸಬೇಕು

* ರಮ್ಜಾನ್‌ಗೆ ರಿಯಾಯಿತಿ ನೀಡಬೇಕು ಎಂದು ಶಾಸಕ ಜಮೀರ್‌ ಖಾನ್‌ ಮನವಿ ಮಾಡಿದ್ದಾರೆ. ನಿಯಮಗಳು ಹಿಂದು, ಮುಸ್ಲಿಂ, ಕ್ರೈಸ್ತರಿಗೆ ಅನ್ವಯವಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.