
ಬೆಂಗಳೂರು: ನಗರದಲ್ಲಿ ನಿತ್ಯವೂ ಉಂಟಾಗುತ್ತಿರುವ ವಾಹನ ದಟ್ಟಣೆ ಸಮಸ್ಯೆಯು ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರಾಯ್ ಅವರಿಗೂ ಭಾನುವಾರ ತಟ್ಟಿದ್ದು, ಅವರು ಸಾಮಾಜಿಕ ಮಾಧ್ಯಮವಾದ ‘ಎಕ್ಸ್’ನಲ್ಲಿ ಬೆಂಗಳೂರು ಸಂಚಾರ ವ್ಯವಸ್ಥೆ, ಅದರ ನಿರ್ವಹಣೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳು ಹಾಗೂ ವಾಹನ ದಟ್ಟಣೆ ಬಗ್ಗೆ ಇತ್ತೀಚೆಗಷ್ಟೇ ಉದ್ಯಮಿಗಳು ಹಾಗೂ ಟೆಕಿಗಳು ರಾಜ್ಯ ಸರ್ಕಾರವನ್ನು ಟೀಕಿಸಿದ್ದರು. ಇದೀಗ ಹೊರ ರಾಜ್ಯದ ಸಂಸದರೊಬ್ಬರು ರಸ್ತೆಯಲ್ಲಿ ಉಂಟಾದ ದಟ್ಟಣೆಯಲ್ಲಿ ದೀರ್ಘ ಸಮಯ ಸಿಲುಕಿಕೊಂಡಿದ್ದರು. ಅವರಿಗೆ ಆಗಿರುವ ಕೆಟ್ಟ ಅನುಭವವನ್ನು ಬರೆದು ಕೊಂಡಿದ್ದಾರೆ.
‘ಬೆಂಗಳೂರು ಅತೀ ಕೆಟ್ಟ ಸಂಚಾರ ನಿರ್ವಹಣೆ ಹೊಂದಿರುವ ನಗರವಾಗಿದೆ. ನಗರದ ಸಂಚಾರ ದಟ್ಟಣೆಯು ಅತ್ಯಂತ ಕುಖ್ಯಾತಿ ಗಳಿಸಿದೆ ಎಂಬುದರಲ್ಲಿ ಸಂದೇಹವಿಲ್ಲ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಬರಹದಲ್ಲಿ ಉಲ್ಲೇಖಿಸಿದ್ದಾರೆ.
‘ಕರ್ನಾಟಕದ ಮುಖ್ಯಮಂತ್ರಿಗಳೇ ಕ್ಷಮಿಸಿ, ಬೆಂಗಳೂರಿನದ್ದು ಅತ್ಯಂತ ಕೆಟ್ಟ ಸಂಚಾರ ವ್ಯವಸ್ಥೆ. ಜವಾಬ್ದಾರಿ ಇಲ್ಲದ, ಪ್ರಯೋಜನಕ್ಕೆ ಬಾರದ ಸಂಚಾರ ಪೊಲೀಸರು. ಅವರು (ಪೊಲೀಸರು) ಕನಿಷ್ಠ ದೂರವಾಣಿ ಕರೆ ಸಹ ಸ್ವೀಕರಿಸು ವುದಿಲ್ಲ. ನಾನು ಎಷ್ಟು ಬಾರಿ ಕರೆ ಮಾಡಿದ್ದೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಇಲ್ಲಿ ಲಗತ್ತಿಸಿದ್ದೇನೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.
‘ರಾಜ್ಕುಮಾರ್ ಸಮಾಧಿ ಬಳಿಯ ರಸ್ತೆಯಲ್ಲಿ ಭಾನುವಾರ ಉಂಟಾದ ಸಂಚಾರ ದಟ್ಟಣೆಯಲ್ಲಿ ದೀರ್ಘ ಸಮಯ ಸಿಲುಕಿಕೊಂಡಿದ್ದೆ. ಇದರಿಂದ ವಿಮಾನ ಪ್ರಯಾಣ ತಪ್ಪುತ್ತಿತ್ತು. ಸಂಸತ್ ಅಧಿವೇಶನಕ್ಕೆ ಹಾಜರಾಗುವುದಕ್ಕೆ ಕೂಡ ಅಡ್ಡಿ ಆಗುವ ಸಾಧ್ಯತೆ ಇತ್ತು. ರಸ್ತೆಯಲ್ಲಿ ಅಷ್ಟೊಂದು ದಟ್ಟಣೆ ಉಂಟಾಗಿದ್ದರೂ ಆ ಸ್ಥಳದಲ್ಲಿ ಒಬ್ಬ ಪೊಲೀಸ್ ಸಹ ಇರಲಿಲ್ಲ. ಈ ಸುಂದರ ನಗರದ ಹೆಸರು ಹಾಳು ಮಾಡಲಾಗುತ್ತಿದೆ’ ಎಂದು ಭಾನುವಾರ ಸಂಜೆ ‘ಎಕ್ಸ್’ನಲ್ಲಿ ಉಲ್ಲೇಖಿಸಿದ್ದರು.
ದಟ್ಟಣೆಯಲ್ಲಿ ಸಿಲುಕಿದ್ದ ರಾಜೀವ್ ರಾಯ್ ಅವರು, ನಗರ ಪೊಲೀಸರ ದೂರವಾಣಿ ಸಂಖ್ಯೆಗಳನ್ನು ತೆಗೆದು ಕೊಂಡು ಕರೆ ಮಾಡಿದ್ದರು. ಯಾವೆಲ್ಲ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿದ್ದರು ಎಂಬುದರ ಸ್ಕ್ರೀನ್ಶಾಟ್ ಸಹ ಲಗತ್ತಿಸಿದ್ದಾರೆ.
‘ನನ್ನ ಯಾವ ಕರೆಗೂ ಸಂಚಾರ ವಿಭಾಗದ ಪೊಲೀಸರು ಸ್ಪಂದಿಸಿಲ್ಲ’ ಎಂದು ಆಪಾದಿಸಿದ್ದಾರೆ. ‘ಎಕ್ಸ್’ ಬರಹಕ್ಕೆ ಹಲವರು ಪ್ರತಿಕ್ರಿಯಿಸಿದ್ದು, ಬೆಂಗಳೂರಿನಲ್ಲಿ ಪ್ರತಿನಿತ್ಯ ಉಂಟಾಗುತ್ತಿ ರುವ ದಟ್ಟಣೆ ಸಮಸ್ಯೆ ಬಗ್ಗೆ ಅನೇಕರು ಬೆಳಕು ಚೆಲ್ಲಿದ್ದಾರೆ. ಇನ್ನೂ ಕೆಲವರು ಯಾವ ಕಾರಣಕ್ಕೆ ಈ ರೀತಿಯ ಸಮಸ್ಯೆ ಆಗಿದೆ ಎಂಬುದನ್ನು ತಿಳಿಸಿದ್ದಾರೆ.
ಜನಸಾಮಾನ್ಯರು ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಸಮಸ್ಯೆ ಬಗ್ಗೆ ತಿಳಿಸುತ್ತಾರೆ. ನಗರದ ಪೊಲೀಸರೂ ಸ್ಪಂದಿಸಿದ್ದಾರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಉತ್ತರ ಭಾರತದ ರಾಜ್ಯಗಳು ಅದರಲ್ಲೂ ಬಿಜೆಪಿ ಆಡಳಿತವಿರುವ ರಾಜ್ಯಗಳು ಅಲ್ಲಿಯೇ ತಮ್ಮ ಜನರಿಗೆ ನೌಕರಿ ನೀಡಲಿ. ಅದರಿಂದ ಬೆಂಗಳೂರಿನತ್ತ ಉತ್ತರ ಭಾರತೀಯರ ಸಾಮೂಹಿಕ ವಲಸೆ ನಿಯಂತ್ರಣಗೊಂಡು ಬೆಂಗಳೂರು ಅತಿ ಜನಸಾಂದ್ರತೆಯ ಶಾಪದಿಂದ ಮುಕ್ತವಾಗಬಹುದು ಎಂದು ಎನ್. ಹರೀಶ್ ಎಂಬುವವರು ಪ್ರತಿಕ್ರಿಯಿಸಿದ್ದಾರೆ.
‘ಉತ್ತರ ಪ್ರದೇಶದವರು ಕೂಡ ಬೆಂಗಳೂರಿನಲ್ಲಿ ಕೆಲಸ ಮಾಡಲು ವಲಸೆ ಬರುತ್ತಿದ್ದಾರೆ. ಅದನ್ನು ಅವರು ನಿಲ್ಲಿಸಿದರೆ ನಮ್ಮ ರಾಜ್ಯದ ಸಂಚಾರ ಸುಗಮ ಆಗಲಿದೆ’ ಎಂದು ಎಬಿಕೆ ಬೆಂಗಳೂರು ಖಾತೆಯಿಂದ ಪ್ರತಿಕ್ರಿಯೆ ಬಂದಿದೆ.
ರಾಜೀವ್ ರೈ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಾನು ದೆಹಲಿಯಲ್ಲಿ ಆ ಸಂಸದರನ್ನು ಭೇಟಿಯಾಗುತ್ತೇನೆ. ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಟ್ರಾಫಿಕ್ ನಿರ್ವಹಣೆಯನ್ನು ಅವರಿಗೆ ತೋರಿಸುತ್ತೇನೆ. ನಂತರ ಅವರನ್ನು ಕೂಡ ಟ್ಯಾಗ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ರಾಜೀವ್ ರೈ ಅವರ ಹೇಳಿಕೆಯ ನಂತರ, ನಗರದ ರಸ್ತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗಳು ಶುರುವಾಗಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ರಸ್ತೆ ಸಮಸ್ಯೆ ಹಾಗೂ ಟ್ರಾಫಿಕ್ ಕುರಿತು ಹಲವು ಉದ್ಯಮಿಗಳು ಧ್ವನಿ ಎತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.