ಚಿತ್ರದುರ್ಗ: ಬರಪೀಡಿತ ಪ್ರದೇಶದ ಜನರ ಕಷ್ಟಗಳನ್ನು ಆಲಿಸಬೇಕಾದ ರಾಜಕಾರಣಿಗಳು ರೆಸಾರ್ಟ್ ಸೇರಿದ್ದಾರೆ. ಈ ಅಧಿಕಾರ ವ್ಯಾಧಿಗೆ ಔಷಧ ಇಲ್ಲ ಎಂದು ಕಾದಂಬರಿಕಾರ ಬಿ.ಎಲ್.ವೇಣು ಬೇಸರ ವ್ಯಕ್ತಪಡಿಸಿದರು.
ಭಾನುವಾರ ಇಲ್ಲಿ ನಡೆದ ಬರಗೂರು ಹಾಗೂ ರಾಜಲಕ್ಷ್ಮಿ ಬರಗೂರು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ರೆಸಾರ್ಟ್ ರಾಜಕಾರಣದಲ್ಲಿ ಪಕ್ಷಭೇದವಿಲ್ಲ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಎಲ್ಲ ಶಾಸಕರು ಮೋಜು, ಮಸ್ತಿಯಲ್ಲಿ ತೊಡಗಿದ್ದಾರೆ.ಈ ಅಧಿಕಾರ ವ್ಯಾಧಿಯನ್ನು ಗುಣಪಡಿಸಲು ಸಾಧ್ಯವಿಲ್ಲ’ ಎಂದರು.
‘ಧರ್ಮದಲ್ಲಿಯೂ ರಾಜಕಾರಣ ಬೆರೆಯುತ್ತಿದೆ. ಮಠಾಧೀಶರು ಎಲ್ಲ ಪಕ್ಷದಲ್ಲೂ ತಮ್ಮ ಶಿಷ್ಯರನ್ನು ಬೆಳೆಸುತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನೋಡಿಕೊಳ್ಳುತ್ತಾರೆ. ಸ್ವಾಮೀಜಿಗಳಿಗೆ ಇದೊಂದು ಚಟವಾಗಿದ್ದು, ಮಠಗಳು ರಾಜಕಾರಣಿಗಳ ಪಾಲಿನ ಸ್ವಿಸ್ ಬ್ಯಾಂಕ್ಗಳಾಗುತ್ತಿವೆ’ ಎಂದು ಹೇಳಿದರು.
‘ಸಿನಿಮಾ ಪಾತ್ರವೊಂದಕ್ಕೆ ತಮ್ಮ ಜನಾಂಗದ ನಟನೇ ನಾಯಕನಾಗಬೇಕು ಎಂದು ಪಟ್ಟುಹಿಡಿಯುವ ಮಟ್ಟಕ್ಕೆ ಮಠಗಳು ಬೆಳೆದಿರುವುದು ವಿಷಾದದ ಸಂಗತಿ. ಸ್ವಾರ್ಥ ಸಾಧನೆಗಾಗಿ ಸ್ವಾಮೀಜಿಗಳು ಪ್ರಗತಿಪರರ ಸೋಗು ಹಾಕುತ್ತಿದ್ದಾರೆ. ಮಹಾತ್ಮ ಗಾಂಧೀಜಿ ಯಾರಿಗೂ ಬೇಕಾಗಿಲ್ಲ, ಎಲ್ಲರೂ ಗೋಡ್ಸೆ ಭಕ್ತರಾಗುತ್ತಿದ್ದಾರೆ’ ಎಂದು ಬೇಸರ ಹೊರಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.