ವಿಜಯಪುರ: ‘ಪಂಚಮಸಾಲಿ ಸಮಾಜದ ಐತಿಹಾಸಿಕ ಬೇಡಿಕೆಯಾದ 2ಎ ಮೀಸಲಾತಿ ನೀಡುವ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮುಂದಿನ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿ ಹಾಕುವುದು ಮಾತ್ರ ಬಾಕಿ ಇದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಹೊರ್ತಿಯಲ್ಲಿ ಗುರುವಾರ ನಡೆದ ರೇವಣ ಸಿದ್ಧೇಶ್ವರ ಏತ ನೀರಾವರಿ ಯೋಜನೆಯ ಹಂತ –1 ಹಾಗೂ ಇಂಡಿ ತಾಲ್ಲೂಕಿನ 16 ಕೆರೆ ತುಂಬುವ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಬೊಮ್ಮಾಯಿ ಎದುರೇ ಅವರು ಈ ಮಾತು ಹೇಳಿದರು.
‘ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವ ವಿಷಯದಲ್ಲಿ ಮುಖ್ಯಮಂತ್ರಿಗಳೇ ಈ ಬಾರಿ ಯಾವುದೇ ಕಾರಣಕ್ಕೂ ಸುಳ್ಳು ಹೇಳಬೇಡಿ’ ಎಂದು ತಾಕೀತು ಮಾಡಿದರು.
‘ಇನ್ನು ಮುಂದೆ ಮುಖ್ಯಮಂತ್ರಿ ಅವರು ಹೋದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡುವ ಯೋಜನೆ ಬದಲಿಗೆ ಬಿಜೆಪಿ ಬಾವುಟ ಪ್ರದರ್ಶಿಸೋಣ’ ಎಂದು ಸಮಾಜದವರಿಗೆ ಕರೆ ನೀಡಿದರು.
ಯತ್ನಾಳ ಅವರ ಹೇಳಿಕೆಗೆ ಮುಖ್ಯಮಂತ್ರಿ ಬೊಮ್ಮಾಯಿ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.