ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಲಾ ಬಿ.ನಾರಾಯಣರಾವ್ ಅವರು ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದಾರೆ.
ನೇರವಾಗಿ ರಾಜಕೀಯ ಕ್ಷೇತ್ರಕ್ಕೆ ಈಚೆಗಷ್ಟೇ ಪಾದಾರ್ಪಣೆ ಮಾಡಿದರೂ ಅವರಿಗೆ ರಾಜಕೀಯ ಕ್ಷೇತ್ರ ಹೊಸದಲ್ಲ. ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
l ಅನುಕಂಪದ ಅಲೆ ಗೆಲುವಿನ ದಡಸೇರಿಸುತ್ತದೆಯೇ?
– ನನ್ನ ಪತಿ ಬಿ.ನಾರಾಯಣರಾವ್ ಅವರು ಈ ಕ್ಷೇತ್ರದ ಶಾಸಕರಾಗಿ ಕಡಿಮೆ ಅವಧಿಯಲ್ಲಿ ನಿರೀಕ್ಷೆಗೆ ಮೀರಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅನುಭವ ಮಂಟಪದ ಅಭಿವೃದ್ಧಿಗೆ ಅವರು ಪಟ್ಟಿರುವ ಶ್ರಮ ಎಲ್ಲರಿಗೂ ಗೊತ್ತಿದೆ.
ರಾಷ್ಟ್ರಪತಿ ಅವರನ್ನು ಆಹ್ವಾನಿಸಿ, ಅನುಭವ ಮಂಟಪ ಉದ್ಘಾಟಿಸುವ ಕನಸು ಅವರದ್ದಾಗಿತ್ತು. 18 ಕೆರೆಗಳನ್ನು ತುಂಬಿಸುವ ಯೋಜನೆ ಅವರದ್ದಾಗಿತ್ತು. ಅವರ ಕನಸು ನನಸಾಗಿಸಲು ಮತದಾರರು ಬೆಂಬಲವಾಗಿ l ವಿಶ್ವಾಸ ಇದೆ.
l ಗೆದ್ದರೆ ನೀವು ಮಾಡುವ ಅಭಿವೃದ್ಧಿ ಕಾರ್ಯಗಳೇನು?
–ಅಪೂರ್ಣಗೊಂಡಿರುವ ಕಾಮಗಾರಿ ಪೂರ್ಣಗೊಳಿಸುವುದು ಹಾಗೂ ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನನ್ನ ಗುರಿಯಾಗಿದೆ.
l ಪ್ರತಿಸ್ಪರ್ಧಿಗಳನ್ನು ಎದುರಿಸಲು ಏನು ತಯಾರಿ ಮಾಡಿಕೊಂಡಿದ್ದೀರಿ?
– ನಾನು ರಾಜಕೀಯಕ್ಕೆ ಮೊದಲ ಬಾರಿಗೆ ಬಂದಿರಬಹುದು. ಆದರೆ, 35 ವರ್ಷಗಳ ಹಿಂದೆಯೇ ರಾಜಕೀಯದಲ್ಲಿರುವ ವ್ಯಕ್ತಿಯನ್ನೇ ವಿವಾಹವಾಗಿದ್ದೆ. ಬಹಿರಂಗವಾಗಿ ಕಾಣಿಸಿಕೊಳ್ಳದಿದ್ದರೂ ಪತಿಗೆ ಬೆಂಬಲವಾಗಿ ನಿಲ್ಲುವ ಜತೆಗೆ ರಾಜಕೀಯ ಚೆನ್ನಾಗಿ ಅರಿತುಕೊಂಡಿದ್ದೇನೆ. ನಮ್ಮ ಪಕ್ಷ, ಮುಖಂಡರು ಮತ್ತು ಕಾರ್ಯಕರ್ತರ ಪಡೆ ನನ್ನ ಗೆಲುವಿಗೆ ಶ್ರಮಿಸುತ್ತಿದೆ.
l ನಿಮ್ಮ ಗೆಲುವಿಗೆ ಜೆಡಿಎಸ್ ಅಭ್ಯರ್ಥಿ ತೊಡಕಾಗಲಿದ್ದಾರೆಯೇ?
– ಕಾಂಗ್ರೆಸ್ ಅಷ್ಟೇ ಅಲ್ಲ, ನನ್ನ ಪತಿ ದಿ.ನಾರಾಯಣರಾವ್ ಅವರಿಗೆ ಅಲ್ಪಸಂಖ್ಯಾತರೊಂದಿಗೆ ಒಡನಾಟ ಇತ್ತು. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪರಿಶ್ರಮ ಪಟ್ಟಿದ್ದಾರೆ. ಅಲ್ಪಸಂಖ್ಯಾತರು ನನ್ನ ಕೈಬಿಡಲಾರರು.
l ಮತದಾರರ ಪ್ರತಿಕ್ರಿಯೆ ಹೇಗಿದೆ?
– ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದೇನೆ. ಕ್ಷೇತ್ರದ ಜನ ಇನ್ನೂ ಬಿ.ನಾರಾಯಣರಾವ್ ಅವರನ್ನು ಮರೆತಿಲ್ಲ. ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ಗೌರವ ಇದೆ. ಪ್ರಚಾರಕ್ಕೆ ಹೋದ ಕಡೆಗಳಲ್ಲಿ ಕಿರಿಯರು, ಹಿರಿಯರು ಬೆಂಬಲ ನೀಡುತ್ತಿದ್ದಾರೆ.
l ಮತದಾರರಲ್ಲಿ ನಿಮ್ಮ ಮನವಿ ಏನು?
– 2018ರಲ್ಲಿ ನನ್ನ ಪತಿಗೆ ಬೆಂಬಲ ನೀಡಿದಂತೆ ಅವರ ಪತ್ನಿಯಾದ ನನಗೂ ಮತದಾರರು ಬೆಂಬಲ ನೀಡಬೇಕು. ಕ್ಷೇತ್ರದ ಜನರ ಸೇವೆ ಮಾಡಲು ಒಂದು ಅವಕಾಶ ಕೊಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.