ರಾಮನಗರ: ಮಾಗಡಿಯ ಕಂಚುಗಲ್ ಬಂಡೆ ಮಠದ ಬಸವಲಿಂಗ ಸ್ವಾಮೀಜಿಯ ವಿಡಿಯೊ ಚಾಟ್ ಜಾಲತಾಣಗಳಲ್ಲಿ ಬಹಿರಂಗ ಆಗಿದ್ದು, ಶ್ರೀಗಳ ಜೊತೆ ಮಾತನಾಡಿರುವ ಮಹಿಳೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಆರೇಳು ತಿಂಗಳ ಹಿಂದೆ ಭಕ್ತೆಯ ಸೋಗಿನಲ್ಲಿ ಮಹಿಳೆ ಸ್ವಾಮೀಜಿಗೆ ಪರಿಚಯಿಸಿಕೊಂಡಿದ್ದರು. ನಂತರ ಸಲುಗೆ ಬೆಳೆಸಿಕೊಂಡು ಮೊಬೈಲ್ ಸಂಖ್ಯೆ ಪಡೆದಿ ದ್ದರು. ನಂತರದಲ್ಲಿ ಇಬ್ಬರ ನಡುವೆ ವಿಡಿಯೊ ಕರೆಗಳ ಮೂಲಕ ಸಂವಾದ ಹಾಗೂ ಸಲುಗೆ ಬೆಳೆದಿತ್ತು ಎನ್ನಲಾಗಿದೆ.
ಮಹಿಳೆಯೇ ಶ್ರೀಗಳ ಸಂಪರ್ಕ ಬೆಳೆಸಿ, ನಂತರ ಅದನ್ನೇ ಮುಂದಿಟ್ಟುಕೊಂಡು ಹಣಕ್ಕಾಗಿ ಒತ್ತಾಯಿಸಿರಬಹುದು. ಇಲ್ಲವೇ, ಅನ್ಯರು ಮಹಿಳೆಯನ್ನು ಬಳಸಿಕೊಂಡು ಶ್ರೀಗಳನ್ನು ಹನಿಟ್ರ್ಯಾಪ್ ಮಾಡಿರಬಹುದು ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿ
ದ್ದಾರೆ. ಶ್ರೀಗಳ ಆಪ್ತ ಸಹಾಯಕ, ವಾಹನ ಚಾಲಕ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಶ್ರೀಗಳು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೂರು ಡೆತ್ನೋಟ್ ಬರೆದಿ ದ್ದರು. ಮೊದಲನೇ ನೋಟ್ ಅಪೂರ್ಣ ವಾಗಿದ್ದು, ಅದು ಸರಿಯಿಲ್ಲವೆಂದು ಕಿಟಕಿಯಿಂದ ಆಚೆಗೆ ಎಸೆದಿದ್ದರು. ಈ ನೋಟ್ ಭಕ್ತರಿಗೆ ಸಿಕ್ಕಿದ್ದು ಜಾಲತಾಣ ಗಳಲ್ಲಿ ಹರಿದಾಡುತ್ತಿದೆ. ಇನ್ನೂ 2 ಡೆತ್ನೋಟ್ ಇದ್ದು, ಒಟ್ಟು 6 ಪುಟಗಳಿವೆ.
ಬಸವಲಿಂಗ ಸ್ವಾಮೀಜಿ ಆತ್ಯಹತ್ಯೆ ನಿರ್ಧಾರದ ಹಿಂದೆ ಮತ್ತೊಬ್ಬ ಸ್ವಾಮೀಜಿಯ ಕುಮ್ಮಕ್ಕು ಇರುವುದಾಗಿ ಸುದ್ದಿ ಹಬ್ಬಿದೆ. ಹನಿಟ್ರ್ಯಾಪ್ ಮಾಡಿಸಲು ಅದಕ್ಕೆ ರಾಜಕಾರಣಿಯೊಬ್ಬರ ಸಹಕಾರವೂ ಇತ್ತು. ನಂತರದಲ್ಲಿ ಸಂಧಾನ ನಡೆದು ಪೀಠತ್ಯಾಗಕ್ಕೆ ಒತ್ತಾಯಿಸಲಾಗಿತ್ತು ಎಂಬ ಸುದ್ದಿಯೂ ಹರಿದಾಡುತ್ತಿದೆ.
ಈ ಮಧ್ಯೆ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕು ಎಂದು ಮಠದ ಭಕ್ತರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
****
ಸ್ವಾಮೀಜಿ ಬರೆದ 2 ಡೆತ್ ನೋಟ್ಗಳು ಪೊಲೀಸರಿಗೆ ಸಿಕ್ಕಿವೆ. ಪ್ರಕರಣ ಸಂಬಂಧ 20ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದು, ಯಾರನ್ನೂ ವಶಕ್ಕೆ ಪಡೆದಿಲ್ಲ. ವಿಡಿಯೊ ಬಗ್ಗೆಯೂ ಪರಿಶೀಲಿಸುತ್ತಿದ್ದೇವೆ.
-ಸಂತೋಷ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.