ಬೆಂಗಳೂರು: ‘ಶಾಲೆಗಳಲ್ಲಿ ಶಿಕ್ಷಕರು ನೆಮ್ಮದಿಯಿಂದ ಪಾಠ ಮಾಡುವ ವಾತಾವರಣ ಶಿಕ್ಷಣ ವ್ಯವಸ್ಥೆಯಲ್ಲಿ ನಿರ್ಮಾಣವಾಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘವು ಗುರುವಾರ ಆಯೋಜಿಸಿದ್ದ ‘ಪದವೀಧರ ಶಿಕ್ಷಕರ ರಾಜ್ಯ ಮಟ್ಟದ ಪ್ರಥಮ ಶೈಕ್ಷಣಿಕ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.
‘ಕೆಲವು ಶಿಕ್ಷಕರು ಮಾಡುವ ತಪ್ಪುಗಳಿಂದಾಗಿ ಇಡೀ ಶಿಕ್ಷಕ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸರ್ಕಾರಿ ಶಿಕ್ಷಕರು ಸರಿಯಾಗಿ ಪಾಠ ಮಾಡುವುದಿಲ್ಲ ಎಂಬ ಭಾವ ಸಾಮಾನ್ಯರಲ್ಲಿ ಮನೆಮಾಡಿದೆ. ಅದನ್ನು ಸುಳ್ಳಾಗಿಸುವಂತೆ ನೀವು ಕಾರ್ಯನಿರ್ವಹಿಸಿ. ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗುವಂತೆ ಮಾಡಿ’ ಎಂದು ಕಿವಿಮಾತು ಹೇಳಿದರು.
‘ಶಾಲೆಗಳ ನಿರ್ವಹಣೆಯಲ್ಲಿ ಎಸ್ಡಿಎಂಸಿಗಳ ಹಸ್ತಕ್ಷೇಪವನ್ನು ಕಡಿಮೆ ಮಾಡಬೇಕು. ಹೊಸ ಪಿಂಚಣಿ ಯೋಜನೆ(ಎನ್ಪಿಎಸ್) ಅನ್ವಯಿಸಬಾರದು ಎಂದು ನಾನೂ ಶಿಕ್ಷಣ ಸುಧಾರಣಾ ಸಭೆಗಳಲ್ಲಿ ಒತ್ತಾಯಿಸುತ್ತಿದ್ದೇನೆ’ ಎಂದು ತಿಳಿಸಿದರು.
ಪ್ರಾಧ್ಯಾಪಕ ಸಂಗಮನಾಥ ಲೋಕಾಪೂರ,‘ಮಾಹಿತಿಗಳನ್ನು ಸಂಗ್ರಹಿಸಿ, ವರದಿಗಳನ್ನು ಸಿದ್ಧಪಡಿಸಿ ಅಧಿಕಾರಿಗಳಿಗೆ ಕಳುಹಿಸುವುದೇ ಶಿಕ್ಷಕರ ಕೆಲಸವಾಗಿದೆ. ಹಿಂದೇ ಶಿಕ್ಷಕರು ಮತ್ತು ಇಲಾಖಾ ಅಧಿಕಾರಿಗಳಿಗೆ ಸಂವೇದನೆ ಇತ್ತು. ಈಗ ಆ ಜಾಗದಲ್ಲಿ ಸಂಪಾದನೆ ತುಂಬಿಕೊಂಡಿದೆ. ಹಾಗಾಗಿ ಗುಣಮಟ್ಟ ಕುಸಿಯುತ್ತಿದೆ’ ಎಂದು ವಿವರಿಸಿದರು.
‘ದುಡ್ಡು ಕೊಡದಿದ್ದರೆ ಸರ್ಕಾರದ ಯಾವ ಕೆಲಸಾನೂ ಆಗಲ್ಲ. ಶಿಕ್ಷಣ ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿದೆ. ಸಾವಿರ ಮೋದಿ, ಕುಮಾರಸ್ವಾಮಿಗಳು ಬಂದರೂ ವ್ಯವಸ್ಥೆ ಸುಧಾರಿಸಲ್ಲ’ ಎಂದು ಪರಿಷತ್ ಸದಸ್ಯ ಆರ್.ಚೌಡರೆಡ್ಡಿ ಬೇಸರಿಸಿದರು.
ಸಮ್ಮೇಳನದಲ್ಲಿ ಭಾಗವಹಿಸಲು ರಾಜ್ಯದ ವಿವಿಧೆಡೆಯಿಂದ ಸಾವಿರಾರು ಶಿಕ್ಷಕರು ಬಂದಿದ್ದರು.
ಶಿಕ್ಷಕರ ಬೇಡಿಕೆಗಳು
* ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ, 6ರಿಂದ 8ನೇ ತರಗತಿ ಶಿಕ್ಷಕರ ವೃಂದದಲ್ಲಿ ಪರಿಗಣಿಸಿ, ಒಂದು ವೇತನ ಬಡ್ತಿ ನೀಡಬೇಕು
* ಮುಂಬಡ್ತಿ ಪ್ರಮಾಣವನ್ನು ಶೇ 25ರಿಂದ ಶೇ 75ಕ್ಕೆ ಹೆಚ್ಚಿಸಬೇಕು
* ಬಡ್ತಿಗಾಗಿ ಇರುವ ಪರೀಕ್ಷೆ ರದ್ದುಪಡಿಸಬೇಕು
* ಪದವೀಧರರಾದ ವರ್ಷ ಹೊರತುಪಡಿಸಿ, ನೇಮಕಾತಿ ಹೊಂದಿದಾಗಿನಿಂದ ಸೇವಾವಧಿ ಪರಿಗಣಿಸಿ ಬಡ್ತಿ ನೀಡಬೇಕು
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.