ADVERTISEMENT

ನೀತಿ ಸಂಹಿತೆ ಜಾರಿ: ಜಾಹೀರಾತು ತೆರವು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2019, 19:34 IST
Last Updated 10 ಮಾರ್ಚ್ 2019, 19:34 IST
ಬೆಂಗಳೂರು ನಗರಾಭಿವೃದ್ಧಿಗೆ ರಾಜ್ಯ ಸರ್ಕಾರ ನೀಡಿದ ಕೊಡುಗೆಗಳನ್ನು ಬಿಂಬಿಸುವ ಜಾಹೀರಾತುಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು
ಬೆಂಗಳೂರು ನಗರಾಭಿವೃದ್ಧಿಗೆ ರಾಜ್ಯ ಸರ್ಕಾರ ನೀಡಿದ ಕೊಡುಗೆಗಳನ್ನು ಬಿಂಬಿಸುವ ಜಾಹೀರಾತುಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು   

ಬೆಂಗಳೂರು: ಲೋಕಸಭಾ ಚುನಾವಣಾ ಘೋಷಣೆಯಾಗಿ ನಗರದಲ್ಲಿ ಭಾನುವಾರ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಪಾಲಿಕೆ ಸಿಬ್ಬಂದಿ ಸರ್ಕಾರಿ ಮತ್ತು ರಾಜಕೀಯ ಪಕ್ಷಗಳ ಜಾಹೀರಾತುಗಳ ತೆರವು ಕಾರ್ಯಚರಣೆಯನ್ನು ಆರಂಭಿಸಿದರು.

ಪ್ರಯಾಣಿಕರ ತಂಗುದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ್ದ ಪ್ರಚಾರ ಸಾಮಗ್ರಿ ಒಳಗೊಂಡ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು. ಅವುಗಳನ್ನು ಪಾಲಿಕೆಯ ವಾಹನಗಳಲ್ಲಿಯೇ ನಿಗದಿತ ಸ್ಥಳಗಳಿಗೆ ಸಾಗಿಸಲಾಯಿತು.

ನಗರದ ಹಲವಾರು ವಾರ್ಡ್‌ಗಳಲ್ಲಿ ಅಳವಡಿಸಿದ್ದ ಸಂಸದರ ಹೆಸರು ಮತ್ತು ಭಾವಚಿತ್ರಗಳನ್ನು ಒಳಗೊಂಡ ಕೇಂದ್ರ ಸರ್ಕಾರದ ಯೋಜನೆಗಳ ವಿವರಗಳಿದ್ದ ಜಾಹೀರಾತು ಹಾಗೂ ಫಲಕಗಳನ್ನು ಸಹ ತೆರವು ಮಾಡಲಾಯಿತು. ವಾರ್ಡ್‌ಗಳಲ್ಲಿನ ಮಾರ್ಗಸೂಚಕ ಫಲಕಗಳ ಮೇಲೆ ಬರೆಯಲಾಗಿರುವ ಪಾಲಿಕೆ ಸದಸ್ಯರು, ಶಾಸಕರು ಮತ್ತು ಸಂಸದರ ಹೆಸರುಗಳನ್ನು ಅಂಟುಪಟ್ಟಿಗಳಿಂದ ಮರೆಮಾಚಲಾಗುತ್ತಿದೆ.

ADVERTISEMENT

ನಗರದ ಕೇಂದ್ರಭಾಗದಲ್ಲಿ ಸೇರಿದಂತೆ ಮೈಸೂರು ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್‌ ರಸ್ತೆ, ಹೊಸೂರು ರಸ್ತೆ, ಮಾಗಡಿ ರಸ್ತೆ ಹಾಗೂ ಕನಕಪುರ ರಸ್ತೆಯ ಬದಿಯಲ್ಲಿ ಅಳವಡಿಸಿದ್ದ ಹೆಚ್ಚಿನ ಜಾಹೀರಾತುಗಳನ್ನು ತೆರವುಗೊಳಿಸಲು ಸಿಬ್ಬಂದಿ ಆದ್ಯತೆ ನೀಡಿದ್ದರು. ಬಳಿಕ ಇತರೆ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.