ADVERTISEMENT

ಜಿಲ್ಲೆ ಅಖಂಡವಾಗಿದ್ದರೆ ಮಾತ್ರ ಅಭಿವೃದ್ಧಿ: ವಿಜಯನಗರ ಜಿಲ್ಲೆ ರಚನೆಗೆ ವಿರೋಧ

ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ನಾಳೆ ಬಂದ್‌

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 19:41 IST
Last Updated 20 ಸೆಪ್ಟೆಂಬರ್ 2019, 19:41 IST
ಶ್ರೀರಾಮುಲು
ಶ್ರೀರಾಮುಲು   

ಬಳ್ಳಾರಿ: ವಿಜಯನಗರ ಜಿಲ್ಲೆ ಸ್ಥಾಪನೆಯ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚಿಸಿರುವ ಬೆನ್ನಿಗೇ, ಸಚಿವ ಬಿ.ಶ್ರೀರಾಮುಲು, ಶಾಸಕ ಜಿ.ಸೋಮಶೇಖರರೆಡ್ಡಿ ವಿರೋಧ ವ್ಯಕ್ತಪಡಿಸಿದ್ದಾರೆ.

ನಗರದ ತಮ್ಮ ಮನೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ‘ಬಳ್ಳಾರಿ ಜಿಲ್ಲೆ ಒಂದು. ನಾವೆಲ್ಲ ಒಂದಾಗಿರಬೇಕು. ಬಳ್ಳಾರಿ ಅಖಂಡವಾಗಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಈಗಾಗಲೇ ಹೊಸ ಜಿಲ್ಲೆಗಳಾಗಿರೋದನ್ನ ನೋಡಿದ್ದೇವೆ. ವಿಭಜನೆಯಾದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಈಗ ಈ ಬಗ್ಗೆ ಹೆಚ್ಚು ಮಾತನಾಡಿ, ಮುಖ್ಯಮಂತ್ರಿಯವರಿಗೆ ಮುಜುಗರ ಉಂಟುಮಾಡಲ್ಲ’ ಎಂದರು.

‘ಸ್ವಾರ್ಥಿಗಳ ಕೂಟ ಜಿಲ್ಲೆಯನ್ನು ಇಬ್ಭಾಗ ಮಾಡಲು ಹೊರಟಿದೆ. ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವ ನಿಯೋಗದಲ್ಲಿರುವರೆಲ್ಲರೂ ಸ್ವಾರ್ಥಿಗಳೇ. ಸ್ವಹಿತಾಸಕ್ತಿಗೋಸ್ಕರವಾಗಿ ಜಿಲ್ಲೆಯ ಇಬ್ಭಾಗಕ್ಕೆ ಮುಂದಾಗಿರೋದು ಅಕ್ಷಮ್ಯ ಅಪರಾಧ’ ಎಂದು ಸೋಮಶೇಖರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಬೇಕಾದರೆ, ಬಳ್ಳಾರಿಗೇ ವಿಜಯನಗರ ಎಂಬ ಹೆಸರನ್ನು ಇಟ್ಟರಾಯಿತು. ಅದು ಬಿಟ್ಟು ನೂತನ ಜಿಲ್ಲೆಯನ್ನಾಗಿ ವಿಜಯನಗರ ಕ್ಷೇತ್ರವನ್ನು ಬದಲಿಸೋದು ಬೇಡ’ ಎಂದು ಪ್ರತಿಪಾದಿಸಿದರು.

‘ಹೊಸ ಜಿಲ್ಲೆ ರಚನೆಗೂ ಮುನ್ನ ಮುಖ್ಯಮಂತ್ರಿ ಸತ್ಯಶೋಧನಾ ಸಮಿತಿಯನ್ನು ರಚಿಸಿ, ಪಶ್ಚಿಮ ತಾಲ್ಲೂಕುಗಳಲ್ಲಿ ಅಭಿಪ್ರಾಯ ಸಂಗ್ರಹಿಸಬೇಕು’ ಎಂದು ಶಾಸಕ ಎಲ್‌.ಬಿ.ಪಿ ಭೀಮಾನಾಯ್ಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನಾಳೆ ಬಂದ್: ‘ಹಗರಿಬೊಮ್ಮನಹಳ್ಳಿಯನ್ನೇ ಜಿಲ್ಲಾ ಕೇಂದ್ರ ಮಾಡಬೇಕು’ ಎಂದು ಆಗ್ರಹಿಸಿ ಅಲ್ಲಿನ ವಿವಿಧ ಸಂಘಟನೆಗಳು ಸೆ.22ರಂದು ಬಂದ್‌ಗೆ ಕರೆ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.