
ಬೆಂಗಳೂರು: 'ಒಂದು ಕಾಲದಲ್ಲಿ ಬೆಂಗಳೂರು 'ಜಾಗತಿಕ ಸಾಮರ್ಥ್ಯ ಕೇಂದ್ರ'ಗಳ (ಜಿಸಿಸಿ) ಪೈಕಿ ಮುಂಚೂಣಿಯಲ್ಲಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಬೆಂಗಳೂರು 'ಜಾಗತಿಕ ಭ್ರಷ್ಟಾಚಾರ ಕೇಂದ್ರ'ಗಳಲ್ಲಿ ಮುನ್ನಡೆಯಲ್ಲಿದೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಭಾರತದ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಪಟ್ಟಿಯಲ್ಲಿ ಬೆಂಗಳೂರನ್ನು ಹಿಂದಿಕ್ಕಿರುವ ಹೈದರಾಬಾದ್ ಅಗ್ರಸ್ಥಾನಕ್ಕೇರಿದೆ ಎಂಬುದಕ್ಕೆ ಸಂಬಂಧಿಸಿದಂತೆ ವರದಿಯನ್ನು ಹಂಚಿಕೊಂಡಿರುವ ವಿಜಯೇಂದ್ರ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ರಾಜ್ಯದ ಪ್ರತಿಯೊಂದು ಇಲಾಖೆ, ಸಚಿವಾಲಯವು ಭ್ರಷ್ಟಾಚಾರದಿಂದ ತುಂಬಿಕೊಂಡಿದೆ. ಗುಂಡಿ ಮಚ್ಚುವ ಕಾರ್ಯ, ಕಸ ಗುಡಿಸುವ ಯಂತ್ರಗಳಲ್ಲಿ ₹600 ಕೋಟಿ ಹಗರಣ ಮತ್ತು ನಗರದಾದ್ಯಂತ ಮೂಲಸೌಕರ್ಯದ ಸ್ಥಿತಿ ಶೋಚನೀಯವಾಗಿದೆ' ಎಂದು ಅವರು ಆರೋಪಿಸಿದ್ದಾರೆ.
'ಇತರೆ ರಾಜ್ಯಗಳನ್ನು ಆಯ್ಕೆ ಮಾಡಿದ್ದಕ್ಕಾಗಿ ಕಾರ್ಪೊರೇಟರ್ಗಳನ್ನು ರಾಜ್ಯ ಸರ್ಕಾರ ಅಪಹಾಸ್ಯ ಮಾಡುತ್ತಿದೆ. ಈಶಾನ್ಯ ರಾಜ್ಯಗಳ ನಾಗರಿಕರ ವಿರುದ್ಧ ಜನಾಂಗೀಯ ನಿಂದನೆ ಮಾಡಲು ಹಿಂಜರಿಯುವುದಿಲ್ಲ. ಇಡೀ ಸಮಸ್ಯೆಗೆ ರಾಜ್ಯ ನಾಯಕರ ಅಸಮರ್ಥತೆ ಹಾಗೂ ಭ್ರಷ್ಟಾಚಾರವು ಮೂಲ ಕಾರಣ ಎಂಬುದನ್ನು ಮರೆತಂತಿದೆ' ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.