ಬೆಂಗಳೂರು: ಪಾದರಾಯನಪುರದ ಗುಡ್ಡದಹಳ್ಳಿಯಲ್ಲಿ ಭಾನುವಾರ ರಾತ್ರಿ ಬಿಬಿಬಿಎಂಪಿ ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಮಹಿಳಾ ರೌಡಿ ಸೇರಿ 54 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೋವಿಡ್-19 ಸೋಂಕಿತರ ಜೊತೆ ದ್ವಿತೀಯ ಸಂಪರ್ಕದಲ್ಲಿದ್ದ ಸೋಂಕು ಶಂಕಿತರನ್ನು ಕ್ವಾರಂಟೈನ್ ಮಾಡಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು.
ಕ್ವಾರಂಟೈನ್ಗೆ ಒಪ್ಪದ ಶಂಕಿತರು ಹಾಗೂ ಅವರ ಕಡೆಯವರು, ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದ್ದರು. ರಸ್ತೆಗೆ ಅಡ್ಡವಾಗಿ ಹಾಕಿದ್ದ ತಗಡು, ಬ್ಯಾರಿಕೇಡ್ ಕಿತ್ತು ಹಾಕಿದ್ದರು. ಸ್ಥಳದಲ್ಲಿದ್ದ ಪೆಂಡಾಲ್ ಧ್ವಂಸ ಮಾಡಿದ್ದರು.
ರಾತ್ರಿಯೇ ಸ್ಥಳಕ್ಕೆ ಹೋಗಿದ್ದ ಪೊಲೀಸರು, ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದರು. ಘಟನೆ ಸಂಬಂಧ ಜಗಜೀವನರಾಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
'ಘಟನೆ ಸಂಬಂಧ ರೌಡಿಶೀಟರ್ ಫಿರೋಜಾ ಎಂಬ ಮಹಿಳೆ ಸೇರಿ 54 ಮಂದಿಯನ್ನು ಬಂಧಿಸಲಾಗಿದೆ. ಫಿರೋಜಾ, ಸ್ಥಳೀಯವಾಗಿ ಗಾಂಜಾ ಮಾರುತ್ತಿದ್ದಳು. ಆಕೆಯೇ ಸಂಚು ರೂಪಿಸಿ ಗಲಾಟೆ ಮಾಡಿಸಿದ್ದಾಳೆ. ಬಂಧಿತ ಆರೋಪಿಗಳ ಮೇಲೆ ಈ ಹಿಂದೆಯೇ ಹಲವು ಪ್ರಕರಣಗಳು ದಾಖಲಾಗಿವೆ. ಅವರೆಲ್ಲ ಅಪರಾಧ ಹಿನ್ನೆಲೆಯುಳ್ಳವರು. ಗಲಾಟೆ ವೇಳೆ ಬಹುತೇಕರು ಗಾಂಜಾ ಸೇವಿಸಿದ್ದರು ಎಂಬ ಅನುಮಾನವಿದೆ' ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೇಂದ್ರ ಮುಖರ್ಜಿ ಹೇಳಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಹ ಸೋಮವಾರ ಪಾದರಾಯನಪುರಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.