
ಮಂಡ್ಯ: ‘ಬಿಡದಿ ಟೌನ್ಶಿಪ್ ಹೆಸರಿನಲ್ಲಿ ಈ ಸರ್ಕಾರ 9 ಸಾವಿರ ಎಕರೆ ಫಲವತ್ತಾದ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ಯಾರೂ ಕೂಡ ಒಂದು ಇಂಚು ಭೂಮಿ ಕೊಡಬೇಡಿ. ಯಾರೂ ಹೆದರುವ ಅಗತ್ಯ ಇಲ್ಲ. ಜನರ ಜತೆ ನಾನಿದ್ದೇನೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ರಾಜ್ಯ ಸರ್ಕಾರದ ಬಿಡದಿ ಟೌನ್ಶಿಪ್ಗೆ ರೈತರು ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ರೈತರಿಗೆ ಸ್ಪಂದಿಸದೆ, ರಿಯಲ್ ಎಸ್ಟೇಟ್ ಕುಳಗಳಿಗೆ ಮಿಡಿಯುತ್ತಿದೆ’ ಎಂದು ಆರೋಪಿಸಿದರು.
ಬಿಡದಿ ಟೌನ್ಶಿಪ್ ಬಗ್ಗೆ ನನ್ನ ಕಾಲದಲ್ಲಿ ಆದ ತೀರ್ಮಾನವೇ ಬೇರೆ, ಇವತ್ತಿನ ತೀರ್ಮಾನಗಳೇ ಬೇರೆ. ಅಂದು ಭೂಮಿ ಬೆಲೆ ದೊಡ್ಡ ಮಟ್ಟದಲ್ಲಿರಲಿಲ್ಲ. ಆದರೆ, ಇವತ್ತು ಭೂಮಿಗೆ ಭಾರಿ ಬೆಲೆ ಬಂದಿದೆ ಎಂದರು.
‘ಬಿಡದಿಯಲ್ಲಿ ಸರ್ಕಾರ ಸ್ವಾಧೀನ ಮಾಡಿಕೊಳ್ಳಲು ಹೊರಟಿರುವ ಭೂಮಿಯ ವ್ಯಾಪ್ತಿಯಲ್ಲಿಯೇ ಈಗಲ್ ಟನ್ ಗಾಲ್ಫ್ ಕ್ಲಬ್ ಇದೆ. ಅದು ಸರ್ಕಾರಿ ಕರಾಬು ಭೂಮಿ ಅತಿಕ್ರಮಿಸಿದೆ ಎಂದು ಆರೋಪಿಸಿ 2018ರಲ್ಲಿ ಚದರ ಅಡಿ ಲೆಕ್ಕದಲ್ಲಿ ದಂಡವನ್ನೂ ವಿಧಿಸಿದ್ದಾರೆ. ಹಿಂದೆ, ಡಿ.ಕೆ. ಶಿವಕುಮಾರ್ ಅವರು ಈಗಲ್ ಟನ್ ಕ್ಲಬ್ಗೆ ಊಟಕ್ಕೆ ಹೋದಾಗ ಅಲ್ಲಿನ ಸಿಬ್ಬಂದಿ ₹98 ಸಾವಿರ ಬಿಲ್ ಕೊಟ್ಟಿದ್ದರು. ನನಗೇ ಬಿಲ್ ಕೊಡುತ್ತೀರಾ ಎಂದು 70 ಎಕರೆ ಕರಾಬು ಭೂಮಿಗೆ ₹984 ಕೋಟಿ ದಂಡ ವಿಧಿಸಿದ್ದರು’ ಎಂದು ಹೇಳಿದರು.
‘ಪ್ರತಿ ಎಕರೆಗೆ ₹13 ಕೋಟಿ ದಂಡ ವಿಧಿಸಬೇಕು ಎಂದು ಸಂಪುಟ ಸಭೆ ತೀರ್ಮಾನ ಕೈಗೊಂಡಿತ್ತು. ಕಾಂಗ್ರೆಸ್ ಸರ್ಕಾರವೇ ಕೈಗೊಂಡಿರುವ ತೀರ್ಮಾನದ ಪ್ರಕಾರ ರೈತರಿಗೆ 1:3 ಅನುಪಾತದಲ್ಲಿ ಪರಿಹಾರ ಕೊಟ್ಟುಬಿಡಿ’ ಎಂದು ಒತ್ತಾಯಿಸಿದರು.
‘ಕನಕಪುರದಲ್ಲಿ ಒಣ ಬೇಸಾಯದ ಭೂಮಿ ಇದೆ. ಆ ಭೂಮಿಯನ್ನೇ ವಶಕ್ಕೆ ತೆಗೆದುಕೊಂಡು ಟೌನ್ಶಿಪ್ ಮಾಡಬಹುದಲ್ಲವೇ? ಬಿಡದಿಯ ಮೇಲೆಯೇ ಯಾಕೆ ಬಿದ್ದಿದ್ದೀರಿ? ಕೃಷಿಗೆ ಉತ್ತಮವಾದ ವಾತಾವರಣವಿರುವ ಕಡೆ ರೈತರನ್ನು ಒಕ್ಕಲೆಬ್ಬಿಸಬೇಡಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.