ADVERTISEMENT

ಸ್ಮಾರ್ಟ್‌ ಮೀಟರ್‌ ವಿರುದ್ಧ ಬಿಜೆಪಿ ಅಭಿಯಾನ: ಸಿ.ಎನ್.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 15:03 IST
Last Updated 22 ಏಪ್ರಿಲ್ 2025, 15:03 IST
<div class="paragraphs"><p>ಸಿ.ಎನ್.ಅಶ್ವತ್ಥನಾರಾಯಣ</p></div>

ಸಿ.ಎನ್.ಅಶ್ವತ್ಥನಾರಾಯಣ

   

ಬೆಂಗಳೂರು: ‘ಸ್ಮಾರ್ಟ್‌ ಮೀಟರ್‌ ಅಳವಡಿಕೆ ಯೋಜನೆಯಲ್ಲಿ ₹15,000 ಕೊಟಿಯಷ್ಟು ಅಕ್ರಮವಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬಿಜೆಪಿಯಿಂದ ಅಭಿಯಾನ ಆರಂಭಿಸಿದ್ದೇವೆ’ ಎಂದು ಶಾಸಕ ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಮಾರ್ಟ್‌ ಮೀಟರ್‌ ಕಡ್ಡಾಯ ಮಾಡಲು ಅವಕಾಶವಿಲ್ಲ. ಹೀಗಿದ್ದೂ ಕಡ್ಡಾಯ ಮಾಡಲಾಗಿದೆ. ಜತೆಗೆ ಕಪ್ಪು ಪಟ್ಟಿಯಲ್ಲಿದ್ದ ಕಂಪನಿ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಲೋಕಾಯುಕ್ತ, ಮಹಾಲೇಖಪಾಲರಿಗೆ (ಸಿಎಜಿ) ದೂರು ನೀಡಿದ್ದೇವೆ’ ಎಂದರು.

ADVERTISEMENT

‘ಈಗ ಹೊಸ ಸಂಪರ್ಕಗಳಿಗಷ್ಟೇ ಸ್ಮಾರ್ಟ್‌ ಮೀಟರ್‌ ಎನ್ನುತ್ತಿದ್ದಾರೆ. ಅದನ್ನು ಹಳೆಯ ಗ್ರಾಹಕರಿಗೂ ವಿಸ್ತರಿಸಿದರೆ, ಪ್ರತಿಯೊಬ್ಬರೂ ₹1.5 ಲಕ್ಷ ಪಾವತಿಸಬೇಕಾಗುತ್ತದೆ. 2.50 ಕೋಟಿ ಮೀಟರ್‌ಗಳಿಗೆ ಎಷ್ಟು ಮೊತ್ತವಾಗುತ್ತದೆ ಎಂಬುದನ್ನು ಊಹಿಸಿ’ ಎಂದರು.

‘ಇಂಧನ ಇಲಾಖೆಯಲ್ಲಿ ಲೆಕ್ಕಪರಿಶೋಧನೆಯೇ ಇಲ್ಲದಂತಾಗಿದೆ. ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಉದ್ದೇಶದಿಂದಲೇ ಲೋಕಾಯುಕ್ತ ಮತ್ತು ಸಿಎಜಿಗೆ ದೂರು ನೀಡಿದ್ದೇವೆ. ಜನರಲ್ಲಿ ಜಾಗೃತಿ ಮೂಡಿಸಲು ಆನ್‌ಲೈನ್‌ ಸಹಿ ಅಭಿಯಾನವನ್ನೂ ಆರಂಭಿಸಿದ್ದೇವೆ’ ಎಂದರು.

‘ಇಲ್ಲಿ ಖಜಾನೆ ಕಾಯಬೇಕಾದವರೇ ಲೂಟಿ ಹೊಡೆಯುತ್ತಿದ್ದಾರೆ. ಸದನದಲ್ಲಿ ಈ ಬಗ್ಗೆ ಪ್ರಶ್ನೆ ಎತ್ತಿದರೂ ಪ್ರಯೋಜನವಾಗಿಲ್ಲ. ಇದಕ್ಕೆಲ್ಲಾ ಹೋರಾಟವೇ ಮದ್ದು’ ಎಂದರು.

ಬಿಜೆಪಿ ಶಾಸಕರಾದ ಎಸ್‌.ಆರ್‌.ವಿಶ್ವನಾಥ್, ಸಿ.ಕೆ.ರಾಮಮೂರ್ತಿ, ಧೀರಜ್‌ ಮುನಿರಾಜು ಅವರು ಅಶ್ವತ್ಥನಾರಾಯಣ ನೇತೃತ್ವದಲ್ಲಿ ಸೋಮವಾರ ಲೋಕಾಯುಕ್ತ ಎಸ್‌ಪಿಯನ್ನು ಭೇಟಿ ಮಾಡಿ ದೂರು ನೀಡಿದ್ದರು. 

ಹತ್ತಾರು ಅವ್ಯವಹಾರದ ದೂರು
ಬೆಂಗಳೂರು: ಸ್ಮಾರ್ಟ್ ಮೀಟರ್ ವಿಷಯದಲ್ಲಿ ಹತ್ತಾರು ಅವ್ಯವಹಾರದ ದೂರುಗಳಿದ್ದು ಲೋಕಾಯುಕ್ತರ ಗಮನಕ್ಕೆ ತಂದಿದ್ದೇವೆ ಎಂದು ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವತನಾರಾಯಣ್ ಅವರು ತಿಳಿಸಿದರು.ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು ಭ್ರಷ್ಟಾಚಾರದ ಕುರಿತು ಲೋಕಾಯುಕ್ತರಿಗೂ ಸವಿಸ್ತಾರವಾಗಿ ತಿಳಿಸಿದ್ದೇವೆ. ನೇರವಾಗಿ ಲೋಕಾಯುಕ್ತ ಎಸ್ಪಿಗೆ ದೂರು ನೀಡಿದ್ದೇವೆ. ಕ್ರಮ ವಹಿಸಿ ತಾರ್ಕಿಕ ಅಂತ್ಯ ಕೊಡಬೇಕೆಂದು ಕೋರಿದ್ದಾಗಿ ತಿಳಿಸಿದರು. ಭ್ರಷ್ಟಾಚಾರ ತಡೆಗಾಗಿ ಈ ದೂರು ನೀಡಿದ್ದೇವೆ. ಯುದ್ಧ ಪ್ರಾರಂಭವಾಗಿದೆ ಎಂದು ಹೇಳಿದರು.ಸಚಿವ ಕೆ.ಜೆ.ಜಾರ್ಜ್ ಅವರು 9 ಸುಳ್ಳು ಹೇಳಿದ್ದಾರೆ. ಇದನ್ನು ಪತ್ರಿಕಾಗೋಷ್ಠಿಯಲ್ಲೂ ತಿಳಿಸಿದ್ದೇವೆ. ಬೇನಾಮಿ ದುರ್ಬಳಕೆ ನಡೆದಿರುವುದು ಗ್ರಾಹಕರಿಗೆ ಕಡ್ಡಾಯ ಮಾಡಲು ಅವಕಾಶ ಇಲ್ಲದಿದ್ದರೂ ಮಾಡುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಬೆಸ್ಕಾಂ ಎಂ.ಡಿ. ಮಹಂತೇಶ್ ತಾಂತ್ರಿಕ ನಿರ್ದೇಶಕರಾದ ರಮೇಶ್ ಬಾಲಾಜಿ ಮತ್ತಿತರರ ವಿರುದ್ಧ ದೂರು ಕೊಟ್ಟಿದ್ದೇವೆ. ಅಧಿಕಾರ ದುರ್ಬಳಕೆ ಮಾಡಿ ರಾಜಶ್ರೀ ಎಂಬ ಪ್ಲಂಬರ್ ತಯಾರಿಕೆ ಮಾಡುವ ವ್ಯಕ್ತಿಗೆ ಗುತ್ತಿಗೆ ಕೊಡಲು ಎಲ್ಲ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.ಸ್ಮಾರ್ಟ್ ಮೀಟರನ್ನು ಗ್ರಾಹಕರಿಗೆ ಕಡ್ಡಾಯ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೂ ಕಡ್ಡಾಯ ಮಾಡಿದ್ದಾರೆ. ಇದಿಷ್ಟೇ ಅಲ್ಲ; ಬ್ಲ್ಯಾಕ್ ಲಿಸ್ಟ್ ಆದ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.ಶಾಸಕ ಎಸ್.ಆರ್.ವಿಶ್ವನಾಥ್ ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ.ರಾಮಮೂರ್ತಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಮತ್ತು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.