ಬೆಂಗಳೂರು: ಆಗ್ನೇಯ ಪದವೀಧರ ಕ್ಷೇತ್ರದಿಂದ ಬಿಜೆಪಿಯ ಎಂ.ಚಿದಾನಂದಗೌಡ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿದೆ.
ಮಂಗಳವಾರ ಬೆಳಿಗ್ಗೆ ಆರಂಭಗೊಂಡ ಮತ ಎಣಿಕೆ ಪ್ರಕ್ರಿಯೆ ನಿರಂತರ 36 ಗಂಟೆಗಳ ಕಾಲ ನಡೆಯಿತು. ಪ್ರಾಥಮಿಕ ಹಂತದ ಎಣಿಕೆಯ ಬಳಿಕ ಮೊದಲ ಮತ್ತು ಎರಡನೇ ಪ್ರಾಶಸ್ತ್ಯಗಳ ಮತಗಳ ಎಣಿಕೆಯೂ ನಡೆಯಿತು. ಇದರಲ್ಲಿ ಚಿದಾನಂದಗೌಡ ಅವರು ಉಳಿದ ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳಿಸುವ ಮೂಲಕ ವಿಜಯ ಸಾಧಿಸಿದರು.
‘ಮತಗಳ ಎಣಿಕೆಯಲ್ಲಿ ಯಾವುದೇ ಗೊಂದಲ ಇರಲಿಲ್ಲ. 1 ನೇ ಮತ್ತು 2 ನೇ ಪ್ರಾಶಸ್ತ್ಯದ ಮತಗಳ ಎಣಿಕೆ ಸಂದರ್ಭದಲ್ಲಿ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ಕೈಬಿಡುವ (ಎಲಿಮಿನೇಷನ್) ಪ್ರಕ್ರಿಯೆ ನಡೆಯಿತು. ಆ ಬಳಿಕ ಪುನಃ ಎಲ್ಲ ಮತ ಪತ್ರಗಳನ್ನು ಮತ್ತೊಮ್ಮೆ ಎಣಿಕೆ ಮಾಡಬೇಕಾಗುತ್ತದೆ. 14 ಸುತ್ತಿನ ಮತಗಳ ಎಣಿಕೆ ನಡೆದಿದೆ. ಮತಪತ್ರಗಳ ಸಂಖ್ಯೆ ಹೆಚ್ಚು ಇದ್ದುದರಿಂದ ತಡವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಚಿದಾನಂದ ಅವರು ಎರಡನೇ ಪ್ರಾಶಸ್ತ್ಯದ ಮತದ ಗಳಿಕೆಯಲ್ಲಿ ಶೇ 50 ರಷ್ಟು ಪಡೆಯದ ಕಾರಣ ಎಣಿಕೆ ಕಾರ್ಯ ಮುಗಿದರೂ ಫಲಿತಾಂಶ ಪ್ರಕಟಿಸದೇ, ಕೇಂದ್ರ ಚುನಾವಣಾ ಆಯೋಗದ ಅನುಮತಿಗಾಗಿ ಪತ್ರ ಕಳಿಸಲಾಗಿದೆ ಎಂದು ಹೇಳಲಾಗಿತ್ತು.
ಅಭ್ಯರ್ಥಿಗಳು ಪಡೆದ ಮತಗಳು: ಚಿದಾನಂದಗೌಡ 30,976(ಬಿಜೆಪಿ), ಚೌಡರೆಡ್ಡಿ ತೂಪಲ್ಲಿ 18,810(ಜೆಡಿಎಸ್), ರಮೇಶ್ ಬಾಬು 9093(ಕಾಂಗ್ರೆಸ್), ಡಿ.ಟಿ.ಶ್ರೀನಿವಾಸ್ 23,851(ಪಕ್ಷೇತರ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.