ಬೀದರ್: ಲೋಕಸಭೆ ಚುನಾವಣೆ ಅಧಿಸೂಚನೆ ಪ್ರಕಟವಾದಾಗಿನಿಂದ ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪದಲ್ಲಿ ತೊಡಗಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಮತಬೇಟೆಗಾಗಿ ಭಾನುವಾರ ಡಾ.ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆಯಲ್ಲಿ ಪಾಲ್ಗೊಂಡು ಹಲಗೆ ನಾದಕ್ಕೆ ಹೆಜ್ಜೆ ಹಾಕಿದರು.
ಜಿಲ್ಲಾ ಆಡಳಿತದ ವತಿಯಿಂದ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಅವರು ಬಾಬಾಸಾಹೇಬರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಗಣ್ಯರು ಹಾಗೂ ರಾಜಕೀಯ ಮುಖಂಡರು ಸಹ ಪುಷ್ಪ ಸಮರ್ಪಿಸಿದರು.
ಮೆರವಣಿಗೆ ಆರಂಭವಾಗುತ್ತಿದ್ದಂತೆಯೇ ಕಲಾವಿದರು ಹಲಗೆ ಬಾರಿಸಲು ಆರಂಭಿಸಿದರು. ಸಂಗೀತ ವಾದ್ಯಗಳ ಸದ್ದಿಗೆ ಸ್ಥಳದಲ್ಲಿದ್ದವರು ನರ್ತಿಸಲು ಶುರು ಮಾಡಿದಾಗ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಎರಡೂ ಕೈಗಳನ್ನು ಮೇಲಕ್ಕೆತ್ತಿ ಕೆಲ ಹೊತ್ತು ಕುಣಿದರು. ಅಲ್ಲೇ ಇದ್ದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಸಹ ಕೈಗಳನ್ನು ಮೇಲಕ್ಕೆತ್ತಿ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಹಾಗೂ ಅರವಿಂದಕುಮಾರ ಅರಳಿ ಅವರೂ ಸಾಥ್ ನೀಡಿದರು. ಮೆರವಣಿಗೆಯಲ್ಲಿ ಇದ್ದವರಿಗೆ ಹುರಿದುಂಬಿಸಿದರು.
ರಾಜಕೀಯ ಮುಖಂಡರು ನೀಲಿ ಪೇಟಾ ಧರಿಸಿದ್ದರೆ, ಭಗವಂತ ಖೂಬಾ ನೀಲಿ ಜಾಕೆಟ್ ಧರಿಸಿ ಗಮನ ಸೆಳೆದರು. ಅಭ್ಯರ್ಥಿಗಳು ಸಾರ್ವಜನಿಕರಿಗೆ ಒಂದಷ್ಟು ಸಮಯ ಮನರಂಜನೆ ನೀಡಿದರು. ಅವರ ಕುಣಿತದ ದೃಶ್ಯಗಳನ್ನು ಕೆಲವರು ಮೊಬೈಲ್ಫೋನ್ಗಳಲ್ಲಿ ಚಿತ್ರೀಕರಿಸಿದರು. ವಾಟ್ಸ್ಆ್ಯಪ್ಗಳಲ್ಲಿ ಅಪ್ಲೋಡ್ ಮಾಡಿ ಗೆಳೆಯರಿಗೆ ಕಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.