ADVERTISEMENT

ಲಸಿಕೆ ವಿತರಣೆಯ ಪ್ರಗತಿಗೆ ವಿಶ್ವವೇ ಬೆರಗಾಗಿದ್ದರೂ ಕಾಂಗ್ರೆಸ್‌ ಕೊಂಕು: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಅಕ್ಟೋಬರ್ 2021, 9:26 IST
Last Updated 22 ಅಕ್ಟೋಬರ್ 2021, 9:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್–19 ಲಸಿಕೆ ವಿತರಣೆಯಲ್ಲಿ ಭಾರತದ ಪ್ರಗತಿಗೆ ಇಡೀ ವಿಶ್ವವೇ ಬೆರಗಾಗಿದ್ದರೂ ಕಾಂಗ್ರೆಸ್ ನಾಯಕರು ಮಾತ್ರ ಕೊಂಕು ನುಡಿಯುವುದರಲ್ಲಿ ನಿರತರಾಗಿದ್ದಾರೆ ಎಂದು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ.

ಭಾರತದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಉದ್ಯಮಿ ಬಿಲ್ ಗೇಟ್ಸ್ ಮಾಡಿರುವ ಟ್ವೀಟ್‌ ಉಲ್ಲೇಖಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

‘ರಾಹುಲ್ ಗಾಂಧಿ ಹಾಗೂ ಡಿ.ಕೆ.ಶಿವಕುಮಾರ್ ಅವರೇ, ಲಸಿಕೆ ವಿತರಣೆಯಲ್ಲಿ ಭಾರತ ಸಾಧಿಸಿದ ಪ್ರಗತಿಗೆ ವಿಶ್ವವೇ ಬೆರಗಾಗಿದೆ. ಜಾಗತಿಕ ಗಣ್ಯರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ಸಿಗರು ಕೊಂಕು ನುಡಿಯುವುದರಲ್ಲಿ ತಲ್ಲೀನರಾಗಿದ್ದಾರೆ. ನೀವು ಎರಡನೇ ಡೋಸ್‌ ಲಸಿಕೆ ಪಡೆದುಕೊಂಡಿದ್ದೀರಾ’ ಎಂದು ಬಿಜೆಪಿ ಪ್ರಶ್ನಿಸಿದೆ.

ADVERTISEMENT

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ

ಲಸಿಕೆ ಅಭಿಯಾನಕ್ಕೆ ಸಂಬಂಧಿಸಿ ಕಾಂಗ್ರೆಸ್ ಟೀಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದೆ.

‘ಕರ್ನಾಟಕದಲ್ಲಿ 45 ವರ್ಷ ಮೇಲ್ಪಟ್ಟವರ ಪೈಕಿ 1.66 ಕೋಟಿ ಜನರಿಗೆ ಮೊದಲ ಡೋಸ್ ಹಾಗೂ 1.07 ಕೋಟಿ ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಲಸಿಕೆ ವಿರುದ್ಧ ಆರಂಭದಲ್ಲಿ ಅಪಪ್ರಚಾರ ಮಾಡಿದ ಕಾಂಗ್ರೆಸ್‌ ಈಗ ದೇಶದ ಜನರ ಸಂಭ್ರಮವನ್ನೂ ಸಹಿಸಿಕೊಳ್ಳುತ್ತಿಲ್ಲ. ಸಿದ್ದರಾಮಯ್ಯನವರೇ, ನೀವೇಕೆ ಹೀಗೆ’ ಎಂದು ಟ್ವೀಟ್‌ನಲ್ಲಿ ಬಿಜೆಪಿ ಪ್ರಶ್ನಿಸಿದೆ.

‘ರಾಜ್ಯದಲ್ಲಿ ಇದುವರೆಗೆ 6.21 ಕೋಟಿಗೂ ಹೆಚ್ಚು ಲಸಿಕೆ ವಿತರಿಸಲಾಗಿದೆ. 4.15 ಕೋಟಿಗೂ ಹೆಚ್ಚು ಜನರಿಗೆ ಮೊದಲ ಡೋಸ್‌ ಹಾಗೂ 2.06 ಕೋಟಿಗೂ ಅಧಿಕ ಜನರಿಗೆ ಎರಡನೇ ಡೋಸ್‌ ನೀಡಲಾಗಿದೆ. 18 ರಿಂದ 44 ವರ್ಷದೊಳಗಿನವರಿಗೆ 2.31 ಕೋಟಿಗೂ ಅಧಿಕ ಮೊದಲ ಡೋಸ್ ನೀಡಲಾಗಿದೆ. ಸಿದ್ದರಾಮಯ್ಯನವೇ ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

‘ವಿವಿಧ ದೇಶಗಳು ವಿತರಿಸಿದ ಲಸಿಕೆ ಪ್ರಮಾಣ ಹೀಗಿದೆ. ಅಮೆರಿಕ - 41.01 ಕೋಟಿ, ಜಪಾನ್ - 18.21 ಕೋಟಿ, ಜರ್ಮನಿ - 11.12 ಕೋಟಿ, ರಷ್ಯಾ - 9.98 ಕೋಟಿ, ಬ್ರಿಟನ್ - 9.53 ಕೋಟಿ. ಆದರೆ ಇದೇ ಅವಧಿಯಲ್ಲಿ ಭಾರತ 100 ಕೋಟಿ ಡೋಸ್ ಲಸಿಕೆ ವಿತರಿಸಿದೆ. ದೇಶವಾಸಿಗಳ ಆರೋಗ್ಯ ರಕ್ಷಣೆಗಾಗಿ ಮಾಡಿದ ಕೆಲಸಕ್ಕಾಗಿ ಸಂಭ್ರಮಿಸುವುದು ತಪ್ಪೇ ಸಿದ್ದರಾಮಯ್ಯ’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಸಿದ್ದರಾಮಯ್ಯನವರೇ, ಕೋವಿಡ್ ದುರಿತ ಕಾಲದಲ್ಲಿ ಮಾನವೀಯ ನೆಲೆಯಲ್ಲಿ 95ಕ್ಕೂ ಹೆಚ್ಚು ದೇಶಗಳಿಗೆ ಭಾರತ ಲಸಿಕೆ ಪೂರೈಸಿದೆ. ವಿಶ್ವಸಂಸ್ಥೆಯೂ ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಈ ನಡೆಯನ್ನು ಶ್ಲಾಘಿಸಿವೆ. ಇದನ್ನೂ ನೀವು ವೈಫಲ್ಯ ಎಂದು ಪರಿಗಣಿಸುವಿರಾ? ಇದು ದೃಷ್ಟಿದೋಷವೋ, ಹೃದಯದ ದೋಷವೋ’ ಎಂದು ಬಿಜೆಪಿ ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.