ADVERTISEMENT

ಜೆಡಿಎಸ್‌ ಜತೆ ಮೈತ್ರಿ ವರಿಷ್ಠರ ತೀರ್ಮಾನ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 15:04 IST
Last Updated 27 ಡಿಸೆಂಬರ್ 2025, 15:04 IST
ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ   

ಬೆಂಗಳೂರು: ‘ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಳ್ಳಬೇಕೇ ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಈಚೆಗೆ ನಾಲ್ಕು ಪಟ್ಟಣ ಪಂಚಾಯತಿ ಚುನಾವಣೆಗಳಲ್ಲಿ ಗೆದ್ದಿದ್ದ ಬಿಜೆಪಿ ಅಭ್ಯರ್ಥಿಗಳನ್ನು ಗುರುವಾರ ಅಭಿನಂದಿಸಿ ಮಾತನಾಡಿದ್ದ ವಿಜಯೇಂದ್ರ ಅವರು, ‘ಈಗಲೇ ಚುನಾವಣೆ ನಡೆದರೆ ನಾವು 130–140 ಸ್ಥಾನ ಗೆಲ್ಲಲಿದ್ದೇವೆ. ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ’ ಎಂದಿದ್ದರು.

ಮರುದಿನವೇ ತುರ್ತು ಸುದ್ದಿಗೋಷ್ಠಿ ಕರೆದಿದ್ದ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಅವರು, ‘ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಮಾತ್ರವೇ ಬಿಜೆಪಿ ಜತೆಗೆ ಮೈತ್ರಿ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಜತೆಗೆ ಹೊಂದಾಣಿಕೆ ಕಷ್ಟ. ನಾವು ಸ್ವತಂತ್ರವಾಗಿಯೇ ಸ್ಪರ್ಧಿಸುತ್ತೇವೆ’ ಎಂದು ಹೇಳಿದ್ದರು. 

ADVERTISEMENT

ಶನಿವಾರ ದಿಢೀರ್‌ ಸುದ್ದಿಗೋಷ್ಠಿ ನಡೆಸಿದ ವಿಜಯೇಂದ್ರ ಅವರು, ‘ಈಚೆಗೆ ನಡೆದ ಕೆಲ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಬಹುಮತ ಪಡೆದಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು, ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೈಬಲಪಡಿಸಬೇಕು ಎಂಬುದು ನಮ್ಮ ಅಪೇಕ್ಷೆ. ಜೆಡಿಎಸ್‌ನ ಅಪೇಕ್ಷೆ ಸಹ ಇದೇ ಆಗಿದೆ’ ಎಂದು ಹೇಳಿದರು.

‘ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ ಇಲ್ಲ ಎಂದು ನಾವು ಎಲ್ಲಿಯೂ ಹೇಳಿಲ್ಲ. ಆದರೆ ಮೈತ್ರಿ ಮಾಡಿಕೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಅವರು ಹೇಳಿದ್ದನ್ನು ನಾವು ಕೇಳುತ್ತೇವೆ’ ಎಂದರು. 

‘ದೇವೇಗೌಡರು ಮುತ್ಸದ್ಧಿಗಳು. ಅವರ ಬಗ್ಗೆ ನಮಗೆ ಗೌರವವಿದೆ. ಸ್ಥಳಿಯ ಸಂಸ್ಥೆಗಳಲ್ಲಿ ಬಿಜೆಪಿ ಜತೆ ಮೈತ್ರಿ ಇಲ್ಲ ಎಂಬ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ. ಈ ಬಗ್ಗೆ ನಮ್ಮ ವರಿಷ್ಠರು ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಜತೆಗೆ ಮಾತನಾಡಿ, ಗೊಂದಲಗಳನ್ನು ಪರಿಹರಿಸುತ್ತಾರೆ’ ಎಂದು ಸ್ಪಷ್ಟಪಡಿಸಿದರು.

ಉತ್ತರಕ್ಕೆ ನಿತೀಶ್‌, ದಕ್ಷಿಣಕ್ಕೆ ಕುಮಾರಸ್ವಾಮಿ ಎಂದಿದ್ದ ಎಚ್‌ಡಿಡಿ: ಇದೇ ನವೆಂಬರ್‌ನಲ್ಲಿ ನಡೆದಿದ್ದ ಜೆಡಿಎಸ್‌ ಬೆಳ್ಳಿಹಬ್ಬದಲ್ಲಿ ಎಚ್‌.ಡಿ.ದೇವೇಗೌಡ ಅವರು, ‘ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಇನ್ನೂ ಪ್ರಬಲವಾಗಿವೆ ಎಂಬುದನ್ನು ಬಿಹಾರದ ಚುನಾವಣೆಯಲ್ಲಿ ಜೆಡಿಯು ಮತ್ತು ನಿತೀಶ್‌ ಕುಮಾರ್ ಮತ್ತೆ ಸಾಬೀತು ಮಾಡಿದ್ದಾರೆ. ಉತ್ತರಕ್ಕೆ ನಿತೀಶ್‌, ದಕ್ಷಿಣಕ್ಕೆ ಕುಮಾರಸ್ವಾಮಿ. ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ದುಡಿಯಬೇಕು’ ಎಂದು ಕರೆ ನೀಡಿದ್ದರು.

ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ‘ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕು ಎಂಬುದು ಪಕ್ಷದ ಕಾರ್ಯಕರ್ತರ ಆಸೆ. ಜೆಡಿಎಸ್‌ ಅನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕು ಎಂಬುದು ದೇವೇಗೌಡರ ಒತ್ತಾಸೆ’ ಎಂದಿದ್ದರು.

ಪಕ್ಷದ ಕಾರ್ಯಕರ್ತರ ಆಕಾಂಕ್ಷೆಯಂತೆಯೇ ನಾನು ಮಾತನಾಡಬೇಕು. ಪಕ್ಷದ ಅಧ್ಯಕ್ಷನಾಗಿ ಹಾಗೆ ಮಾಡುವುದು ನನ್ನ ಕರ್ತವ್ಯ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು
ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.