ADVERTISEMENT

ಮೈತ್ರಿಗೆ ಬಿತ್ತು ಕತ್ರಿ.. ಪಾದಯಾತ್ರೆಯಲ್ಲ ಅಂತಿಮಯಾತ್ರೆ: ಕಾಂಗ್ರೆಸ್ ವ್ಯಂಗ್ಯ

ಬಿಜೆಪಿ ಪಾದಯಾತ್ರೆಗೆ ಕುಮಾರಸ್ವಾಮಿ ಅಪಸ್ವರದ ಬೆನ್ನಲ್ಲೇ ಕಾಂಗ್ರೆಸ್ ವ್ಯಂಗ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2024, 13:39 IST
Last Updated 31 ಜುಲೈ 2024, 13:39 IST
<div class="paragraphs"><p>ಮೈಸೂರಿನ ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಹೊರಟ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಪೊಲೀಸರು ವಶಕ್ಕೆ ಪಡೆದರು– ಪ್ರಜಾವಾಣಿ ಚಿತ್ರ</p></div>

ಮೈಸೂರಿನ ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಹೊರಟ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಪೊಲೀಸರು ವಶಕ್ಕೆ ಪಡೆದರು– ಪ್ರಜಾವಾಣಿ ಚಿತ್ರ

   

ಸಂಗ್ರಹ ಚಿತ್ರ

ಬೆಂಗಳೂರು: ‘ಮೈತ್ರಿಗೆ ಬಿತ್ತು ಕತ್ರಿ.. ಪಾದಯಾತ್ರೆಯಲ್ಲ, ಅಂತಿಮಯಾತ್ರೆ’ ಎಂದು ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಬಗ್ಗೆ ಎದ್ದಿರುವ ಗೊಂದಲಗಳನ್ನು ಗುರಿಯಾಗಿಸಿ ಕರ್ನಾಟಕ ಕಾಂಗ್ರೆಸ್ ವ್ಯಂಗ್ಯವಾಡಿದೆ.

ADVERTISEMENT

ಈ ಕುರಿತು ಎಕ್ಸ್‌ ತಾಣದಲ್ಲಿ ಇಂದು ಪೋಸ್ಟ್ ಮಾಡಿರುವ ಕಾಂಗ್ರೆಸ್, ‘ಮೈತ್ರಿಗೆ ಬಿತ್ತು ಕತ್ರಿ. ಪಾದಯಾತ್ರೆಯು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಅಂತಿಮಯಾತ್ರೆಗೆ ನಾಂದಿ ಹಾಡಲಿದೆ! ಬಿಜೆಪಿಯ ಪಾದಯಾತ್ರೆ, ಜೆಡಿಎಸ್ ಪಕ್ಷ ಹಾಗೂ ಕುಮಾರಸ್ವಾಮಿಯವರ ಬುಡ ಅಲ್ಲಾಡಿಸಲು ಸೃಷ್ಟಿಯಾದ ನಾಟಕ ಎನ್ನುವುದು ಜೆಡಿಎಸ್‌ಗೆ ಈಗ ಅರ್ಥವಾದಂತಿದೆ ಎಂದಿದೆ.

ಮತ್ತೊಂದೆಡೆ ಕುಮಾರಸ್ವಾಮಿ ಅವರು, ಬಿಜೆಪಿಗೆ ಮಗ್ಗುಲು ಮುಳ್ಳಾಗಿ ಕಾಡಲು ಶುರು ಮಾಡಿದ್ದಾರೆ, ಅಂದಹಾಗೆ ಈ ಪಾದಯಾತ್ರೆ ಪಾಲಿಟಿಕ್ಸ್‌ನಲ್ಲಿ ಯಾರ ಕಾಲನ್ನು ಯಾರು ಎಳೆಯುವುದರಲ್ಲಿ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾಲವೇ ಬಹಿರಂಗಪಡಿಸಲಿದೆ ಎಂದು ವ್ಯಂಗ್ಯವಾಡಿದೆ.

ಅಮಿತ್ ಶಾ ಭೇಟಿಯಾದ ವಿಜಯೇಂದ್ರ

ಮುಡಾ ಹಗರಣದ ಸಮಗ್ರ ತನಿಖೆಗೆ ಆಗ್ರಹಿಸಿ ಮೈಸೂರಿಗೆ ಪಾದಯಾತ್ರೆ ನಡೆಸುವ ತೀರ್ಮಾನದ ಸಂಬಂಧ ಬಿಜೆಪಿ–ಜೆಡಿಎಸ್ ನಾಯಕರಲ್ಲಿ ಗೊಂದಲ ಮೂಡಿರುವ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ದೆಹಲಿಯಲ್ಲಿ ಇಂದು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.

ನವದೆಹಲಿಯಲ್ಲಿಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿಯಾಗಿ ಪಕ್ಷದ ಸಂಘಟನಾತ್ಮಕ ಬೆಳವಣಿಗೆಗಳ ಕುರಿತು ಚರ್ಚಿಸಲಾಯಿತು ಎಂದಿದ್ದಾರೆ.

ಇದೇ ವೇಳೆ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಹಗರಣಗಳ ಕುರಿತ ಮಾಹಿತಿ ವಿವರಗಳನ್ನು ನೀಡಲಾಯಿತು. ಸಂಘಟನೆಯ ಕುರಿತು ನಿರಂತರ ಮಾರ್ಗದರ್ಶನ ನೀಡುತ್ತಾ ಬಂದಿರುವ ಅವರು ಕರ್ನಾಟಕದ ಪ್ರಸ್ತುತ ಬೆಳವಣಿಗೆಯಲ್ಲಿ ಪಕ್ಷ ನಿರ್ವಹಿಸುತ್ತಿರುವ ರೀತಿ-ನೀತಿಗಳ ಕುರಿತು ಮೆಚ್ಚುಗೆ ಸೂಚಿಸಿದರು. ಪಕ್ಷ ಬಲವೃದ್ಧಿಗೆ ಪ್ರೇರಣೆ ತುಂಬುವ ಚೈತನ್ಯಶೀಲ ವ್ಯಕ್ತಿತ್ವದ ಅಮಿತ್ ಶಾ ಅವರ ಇಂದಿನ ಭೇಟಿ ನನ್ನಲ್ಲಿ ಅದಮ್ಯ ಉತ್ಸಾಹ ತುಂಬಿದೆ ಎಂದು ಹೇಳಿದ್ದಾರೆ.

ಪಾದಯಾತ್ರೆ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ

ಇನ್ನೊಂದೆಡೆ ಇಂದು ಬಂಟ್ವಾಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು, ಮುಡಾ ಹಗರಣದ ಸಮಗ್ರ ತನಿಖೆಗೆ ಆಗ್ರಹಿಸಿ ಮೈಸೂರಿಗೆ ಪಾದಯಾತ್ರೆ ನಡೆಸುವ ತೀರ್ಮಾನ ಕೈಗೊಂಡ ಸಂದರ್ಭದಲ್ಲಿ ವಯನಾಡು ಗುಡ್ಡ ಕುಸಿತದಂತಹ ಘಟನೆಗಳು ನಡೆದಿರಲಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೊತೆ ಮಾತುಕತೆ ನಡೆಸಿ ಪಾದಯಾತ್ರೆ ಬಗ್ಗೆ ಶೀಘ್ರವೇ ನಿಲುವು ಪ್ರಕಟಿಸುತ್ತೇವೆ' ಎಂದು ಹೇಳಿದ್ದಾರೆ.

'ಪಾದಯಾತ್ರೆಗೆ ನೈತಿಕ ಬೆಂಬಲವನ್ನೂ ನೀಡುವುದಿಲ್ಲ' ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, 'ಜೆಡಿಎಸ್ ನಮ್ಮ ಮೈತ್ರಿ ಪಕ್ಷ. ಅವರ ಜೊತೆಯೂ ಮಾತನಾಡುತ್ತೇವೆ. ಈ ಬಗ್ಗೆ ನಮ್ಮ ಮನೆ ಒಳಗಡೆ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇವೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.