ADVERTISEMENT

ಬಿಜೆಪಿಯವರು ರಾಜ್ಯದ ಹಿತಕ್ಕಾಗಿ ಚರ್ಚಿಸಲಿ: ಡಿ.ಕೆ. ಶಿವಕುಮಾರ್

ಬಿಜೆಪಿಯವರೇನು ಹೊಲ ಉತ್ತಿದ್ದಾರಾ: ಡಿಕೆಶಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 6:40 IST
Last Updated 10 ಡಿಸೆಂಬರ್ 2018, 6:40 IST
ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)
ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)   

ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದಕ್ಕೆ ಇದು ಒಳ್ಳೆಯ ಅಧಿವೇಶನ. ಬಿಜೆಪಿಯವರು ರಾಜಕೀಯ ಮಾಡುವುದನ್ನು ಬಿಟ್ಟು ರಾಜ್ಯದ ಜನತೆಯ ಹಿತಕ್ಕಾಗಿ ಚರ್ಚೆ ಮಾಡಬೇಕು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಹೇಳಿದರು.

ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಉತ್ತಮ ವಿಷಯಗಳ ಬಗ್ಗೆ ಚರ್ಚೆ ಮಾಡಿದರೆ, ನಾವು ಸಮರ್ಥ ಉತ್ತರ ನೀಡುತ್ತೇವೆ. ಹಸಿರು ಟವಲ್ ಹಾಕಿದವರೆಲ್ಲ ರೈತರಲ್ಲ. ಬಿಜೆಪಿಯವರೇನು ಹೊಲ ಉತ್ತಿದ್ದಾರಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ, ಗುಂಡೂರಾವ್​ ಸದ್ಯಕ್ಕೆ ಗೈರು: ಬೆಳಗಾವಿ ಅಧಿವೇಶನಕ್ಕೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಪೂರ್ವ ನಿಯೋಜಿತ ಕಾರ್ಯಕ್ರಮ ಇರುವುದರಿಂದ ನಾಲ್ಕೈದು ದಿನ ಗೈರಾಗಲಿದ್ದಾರೆ. ಉಳಿದವರೆಲ್ಲರೂ ಅಧಿವೇಶನದಲ್ಲಿ ಹಾಜರಿರುತ್ತಾರೆ ಎಂದು ಸಚಿವರು ತಿಳಿಸಿದರು.

ADVERTISEMENT

ಸರ್ಕಾರ ಕೆಡವಲು ಡಿಕೆಶಿ, ಸಿದ್ದರಾಮಯ್ಯ ಸಾಕೆಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿಕೆಗೆ ಅಧಿವೇಶನ ಮುಗಿಯುವುದರ ಒಳಗೆ ತಕ್ಕ ಉತ್ತರ ನೀಡುತ್ತೇನೆ ಎಂದರು.

ಸಚಿವ ಸಂಪುಟ‌ ವಿಸ್ತರಣೆಯ ದಿನ ಸರ್ಕಾರ ಪತನವಾಗಲಿದೆ ಎಂಬ ಶಾಸಕ ಆರ್​.ಆಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಅಶೋಕ್​ಗೆ ಈಗ ಕೆಲಸವಿಲ್ಲ. ಹಾಗಾಗಿ ಭವಿಷ್ಯ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಸಿದ್ಧಗಂಗಾ ಮಠದ ಶತಾಯುಷಿ ಶಿವಕುಮಾರ ಶ್ರೀಗಳು ಆರೋಗ್ಯವಾಗಿದ್ದಾರೆ. ಚೆನ್ನಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಯಾರು ಕೂಡ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ಅಲ್ಲಿ ಅಲ್ಪಸಂಖ್ಯಾತರ ಆಡಳಿತ ಮಂಡಳಿ ಇದ್ದರೂ ಕೂಡ ಶ್ರೀಗಳನ್ನು ಚೆನ್ನಾಗಿ ‌ನೋಡಿಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದರು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.