ADVERTISEMENT

ಜಮೀರ್ ಅಹ್ಮದ್ ಇ.ಡಿ ಬಲೆಗೆ ಬಿದ್ದಿರುವುದರಿಂದ ಸಿದ್ದರಾಮಯ್ಯಗೆ ಲಾಭ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2021, 6:50 IST
Last Updated 6 ಆಗಸ್ಟ್ 2021, 6:50 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಜಾರಿ ನಿರ್ದೇಶನಾಲಯದ (ಇ.ಡಿ) ಬಲೆಗೆ ಬಿದ್ದಿರುವುದರಿಂದ ಸಿದ್ದರಾಮಯ್ಯ ಅವರಿಗೆ ಲಾಭವಾಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಸರಣಿ ಟ್ವೀಟ್‌ಗಳ ಮೂಲ ಬಿಜೆಪಿಯು ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.

‘ನೂರಾರು ಕೋಟಿ ಲೂಟಿ ಹೊಡೆದು ಅಕ್ರಮ ಸಂಪತ್ತು ಗಳಿಸಿರುವ ಶಾಸಕ ಜಮೀರ್ ಅಹ್ಮದ್ ಖಾನ್ ಈಗ ಇ.ಡಿ ಬಲೆಗೆ ಬಿದ್ದಿರುವುದು ಯಾರಿಗೆ ಲಾಭ ತರಬಹುದೆಂಬುದಕ್ಕೆ ಉತ್ತರ ಲಭಿಸಿದೆ. ಮುಂದಿನ ಚುನಾವಣೆಗಾಗಿ ಸುರಕ್ಷಿತ ಕ್ಷೇತ್ರ ಅರಸುತ್ತಿರುವ ಸಿದ್ದರಾಮಯ್ಯ ಅವರೇ ಇದರ ಸಂಪೂರ್ಣ ಫಲಾನುಭವಿಯಾಗಿದ್ದಾರೆ. ನೆಪ ಮಾತ್ರಕ್ಕೆ ದಾಳಿಯನ್ನು ಖಂಡಿಸುತ್ತಿದ್ದಾರೆ!’ ಎಂದು ಬಿಜೆಪಿ ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

‘ಸಿದ್ದರಾಮಯ್ಯ ಅವರೇ, ಜಮೀರ್ ಮನೆ ಮೇಲೆ ನಡೆದ ಇ.ಡಿ ದಾಳಿ ರಾಜಕೀಯ ಪ್ರೇರಿತ ಎಂದು ನೀವು ಆರೋಪಿಸುತ್ತಿದ್ದೀರಿ. ಆದರೆ, ಇ.ಡಿ ವಿಚಾರಣೆಯಿಂದ‌ ನೆಮ್ಮದಿಯಾಗಿದೆ ಎಂದು ಜಮೀರ್‌ ಹೇಳಿದ್ದಾರೆ. ಹಾಗಾದರೆ ನಿಮ್ಮ ಹೇಳಿಕೆಯೇ ರಾಜಕೀಯ ಪ್ರೇರಿತವಲ್ಲವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಕಾಲಿಟ್ಟ ಕ್ಷಣದಲ್ಲೇ, ಪ್ರತಿಪಕ್ಷ ಸ್ಥಾನದಿಂದ ಖರ್ಗೆಯವರನ್ನು ಖಾಲಿ ಮಾಡಿಸಿದರು. ನಂತರ ಸಿಎಂ ರೇಸ್‌ನಲ್ಲಿದ್ದ ದಲಿತ ನಾಯಕನನ್ನು ಸೋಲಿಸಿದರು. ಚಾಮರಾಜಪೇಟೆ ಕ್ಷೇತ್ರದ ಮೇಲೆ ಕಣ್ಣು ಹಾಯಿಸಿದ ಕೂಡಲೇ ಜಮೀರ್ ಅಕ್ರಮ ಬೆಳಕಿಗೆ ಬಂದು ಸಂಕಟಕ್ಕೆ ಸಿಲುಕಿಕೊಂಡರು’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.