ಬೆಂಗಳೂರು: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನೇತೃತ್ವದಲ್ಲಿ ಉತ್ತರ ಪ್ರದೇಶದ (ಯುಪಿ) ಬಿಜೆಪಿಯು ಕುಸಿಯಲಿದೆ ಎಂದು ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಮೊಯ್ಲಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನರು ಪ್ರಿಯಾಂಕಾಗೆ ಮುಖ್ಯಮಂತ್ರಿ ಆದಿತ್ಯನಾಥ ಅವರಿಗಿಂತಲೂ ಹೆಚ್ಚಿನ ಆದ್ಯತೆ ನೀಡಲಿದ್ದಾರೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.
ʼಉತ್ತರ ಪ್ರದೇಶದಲ್ಲಿ ಬಲಿಷ್ಠವಾಗಿರುವುದಾಗಿ ಬಿಜೆಪಿ ಭಾವಿಸಿದೆ. ಆದರೆ, ನೋಟುರದ್ದತಿ ಮತ್ತು ಜಿಎಸ್ಟಿ ಜಾರಿಯಂತಹ ಕೇಂದ್ರ ಸರ್ಕಾರದ ಯೋಜನೆಗಳಿಂದಾಗಿ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಇಸ್ಪೀಟ್ ಕಾರ್ಡ್ಗಳ ಮನೆಯಂತೆ ಮುರಿದುಬೀಳಲಿದೆʼ ಎಂದಿದ್ದಾರೆ.
ʼಕೇವಲ ಘೋಷಣೆಗಳಿಂದ ಜನರನ್ನು ಸೆಳೆಯಲು ಅಥವಾ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಆ ಕಾರ್ಯವನ್ನು ಒಮ್ಮೆ ಮಾಡಬಹುದು. ಯಾವಾಗಲೂ ಅಲ್ಲʼ ಎಂದೂ ತಿವಿದಿದ್ದಾರೆ.
ಮುಂದುವರಿದು, ʼಪ್ರಿಯಾಂಕಾ ಗಾಂಧಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜನರು ಪ್ರಿಯಾಂಕಾರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಛಾಯೆಯನ್ನು ಕಾಣುತ್ತಿದ್ದಾರೆ. ನೀವು ಆದಿತ್ಯನಾಥ ಮತ್ತು ಪ್ರಿಯಾಂಕಾರನ್ನು ಹೋಲಿಸಿ ನೋಡಿದರೆ, ಯುಪಿ ಜನರು ಖಂಡಿತಪ್ರಿಯಾಂಕಾ ಮತ್ತು ಕಾಂಗ್ರೆಸ್ಗೆ ಆದ್ಯತೆ ನೀಡಲಿದ್ದಾರೆʼ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.