ಬೆಂಗಳೂರು: ‘ಜೆಜೆ ನಗರದಲ್ಲಿ ಚಂದ್ರು ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬೇಜವಾಬ್ದಾರಿ ಹೇಳಿಕೆ ನೀಡಿ, ಘಟನೆಗೆ ಕೋಮು ಬಣ್ಣ ಬಳಿದಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕಬಿ.ಕೆ. ಹರಿಪ್ರಸಾದ್ ಆಗ್ರಹಿಸಿದ್ದಾರೆ.
‘ಘಟನೆ ಬಗ್ಗೆ ಹೇಳಿಕೆ ನೀಡಿರುವ ಗೃಹ ಸಚಿವರು, ಚಂದ್ರು ಎಂಬ ದಲಿತ ಹುಡುಗನನ್ನು ಗುಂಪೊಂದು ಅಡ್ಡಗಟ್ಟಿ ಉರ್ದು ಮಾತನಾಡಲು ಒತ್ತಾಯಿಸಿದೆ. ಆತನಿಗೆ ಉರ್ದು ಬರುತ್ತಿರಲಿಲ್ಲವೆಂದು ಚುಚ್ಚಿ ಚುಚ್ಚಿ ಕೊಲೆ ಮಾಡಲಾಗಿದೆ ಎಂದು ಸ್ವಯಂ ಘೋಷಿತ ತೀರ್ಪು ನೀಡಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಆರಗ ಜ್ಞಾನೇಂದ್ರ ಅವರು ಜ್ಞಾನವೇ ಇಲ್ಲದೆ ಈ ಹೇಳಿಕೆ ನೀಡಿದ್ದಾರೆ’ ಎಂದು ಹೇಳಿದ್ದಾರೆ.
‘ಅಮಾಯಕ ಯುವಕರ ಹೆಣದ ಮೇಲೆ ರಾಜಕೀಯ ಮಾಡಿ ಅಧಿಕಾರ ನಡೆಸುತ್ತಿರುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಕೊಂದವರ್ಯಾರು ಎನ್ನುವುದರ ಮೇಲೆ ಕೊಲೆಯ ಕ್ರೌರ್ಯ ನಿರ್ಣಯಿಸುತ್ತಿದ್ದೀರಿ. ಜಾತಿ ಆಧಾರದಲ್ಲಿ ವೈಭವೀಕರಿಸುತ್ತಿದ್ದೀರಿ. ಕೊಲೆಯಾದ ಯುವಕ ದಲಿತ ಎಂದಿರುವ ನಿಮ್ಮ ದಲಿತ ಪ್ರೇಮವನ್ನು ಧರ್ಮಸ್ಥಳದ ಕನ್ಯಾಡಿಯಲ್ಲಿ ಅದೇ ಸಮುದಾಯದ ದಿನೇಶನನ್ನು ಬಜರಂಗದಳದ ಕಿಟ್ಟಿ ಎಂಬಾತ ಕೊಲೆ ಮಾಡಿದ್ದಾಗ ನಿಮ್ಮ ಕಣ್ಣಿಗೆ ಕಾಣಲೇ ಇಲ್ಲ. ಬಹುಶಃ ನಿಮ್ಮ ಮಾಹಿತಿ ಮೂಲದ ಕೊರತೆ ಇರಬೇಕು. ನಿಮಗೆ ಕಣ್ಣಿನ ದೋಷದ ಸಮಸ್ಯೆ ಇಲ್ಲ. ಕಣ್ಣೇ ಸಮಸ್ಯೆ. ಗೃಹ ಸಚಿವ ಸ್ಥಾನಕ್ಕೆ ನೀವೊಂದು ಅಪಚಾರ’ ಎಂದೂ ಗೃಹ ಸಚಿವರ ವಿರುದ್ಧ ಹರಿಪ್ರಸಾದ್ ಅವರು ಆಕ್ರೋಶ
ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.