ADVERTISEMENT

ಬೌರಿಂಗ್ ಆಸ್ಪತ್ರೆ: ಬಿಪಿಎಲ್‌ ಕಾರ್ಡ್‌‌ ಹೊಂದಿದವರಿಗೆ ಅಂಗಾಂಗ ಕಸಿ ಉಚಿತ

ಯೋಜನೆಯ ಲಾಭ ಪಡೆಯುವಂತೆ ಜಾವೇದ್‌ ಅಖ್ತರ್‌ ಮನವಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 3:03 IST
Last Updated 28 ಫೆಬ್ರುವರಿ 2020, 3:03 IST
ಬೌರಿಂಗ್ ಮತ್ತು ಲೇಡಿ ಕರ್ಜನ್ ಸಂಶೋಧನಾ ಸಂಸ್ಥೆ ಹೊರತಂದ ಆರೋಗ್ಯ ಮಾಹಿತಿಯ ವಿಶೇಷ ಸಂಚಿಕೆಯನ್ನು ಜಾವೇದ್ ಅಖ್ತರ್ ಬಿಡುಗಡೆ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ನಾಗರಾಜ್, ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್. ಮಂಜುನಾಥ್, ಕಿಶೋರ್ ಫಡ್ಕೆ ಹಾಗೂ ಆರೋಗ್ಯ ಇಲಾಖೆಯ ಉಪ ನಿರ್ದೇಶಕ ವಿವೇಕ್ ರೈ ಇದ್ದರು - ಪ್ರಜಾವಾಣಿ ಚಿತ್ರ
ಬೌರಿಂಗ್ ಮತ್ತು ಲೇಡಿ ಕರ್ಜನ್ ಸಂಶೋಧನಾ ಸಂಸ್ಥೆ ಹೊರತಂದ ಆರೋಗ್ಯ ಮಾಹಿತಿಯ ವಿಶೇಷ ಸಂಚಿಕೆಯನ್ನು ಜಾವೇದ್ ಅಖ್ತರ್ ಬಿಡುಗಡೆ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ನಾಗರಾಜ್, ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್. ಮಂಜುನಾಥ್, ಕಿಶೋರ್ ಫಡ್ಕೆ ಹಾಗೂ ಆರೋಗ್ಯ ಇಲಾಖೆಯ ಉಪ ನಿರ್ದೇಶಕ ವಿವೇಕ್ ರೈ ಇದ್ದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅಂಗಾಂಗ ಕಸಿ ಯೋಜನೆ ಬಿಪಿಎಲ್‌ ಕುಟುಂಬಗಳಿಗೆ ಆಶಾಕಿರಣವಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಹೇಳಿದರು.

ಬೌರಿಂಗ್ ಮತ್ತು ಲೇಡಿ ಕರ್ಜನ್ ಸಂಶೋಧನಾ ಸಂಸ್ಥೆಯಲ್ಲಿ ‘ಕಸಿ ರಹಿತ ಅಂಗ ಮರುಪಡೆಯುವಿಕೆ ಕೇಂದ್ರ’ಕ್ಕೆ ಚಾಲನೆ ನೀಡಿ ಮಾತನಾಡಿದರು. ‘ಕಸಿ ಶಸ್ತ್ರಚಿಕಿತ್ಸೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳೆರಡರಲ್ಲೂ ದುಬಾರಿ. ಇದನ್ನು ಅರಿತು ಸರ್ಕಾರ ಪ್ರತ್ಯೇಕವಾಗಿ ಅನುದಾನವನ್ನು ಮೀಸಲಿಟ್ಟಿದೆ. ಅಂಗಾಂಗ ವೈಫಲ್ಯ ಸಮಸ್ಯೆ ಎದುರಿಸುತ್ತಿರುವವರು ಜೀವಸಾರ್ಥಕತೆ ಯೋಜನೆಯಡಿ ಹೆಸರು ನೋಂದಾಯಿಸಿ, ಕಸಿ ಮಾಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಜೀವಸಾರ್ಥಕತೆ ಯೋಜನೆಯ ಸಂಯೋಜಕ ಡಾ.ಕಿಶೋರ್ ಫಡ್ಕೆ ಮಾತನಾಡಿ, ‘ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗಗಳು ಹಲವರಿಗೆ ವರದಾನವಾಗಲಿವೆ. ಮೂತ್ರಪಿಂಡಗಳು, ಹೃದಯ ಸೇರಿದಂತೆ ವಿವಿಧ ಅಂಗಾಂಗಗಳನ್ನು ದಾನ ಮೂಡುವ ಮೂಲಕ ಒಬ್ಬ ವ್ಯಕ್ತಿ ಎಂಟಕ್ಕೂ ಅಧಿಕ ಮಂದಿಗೆ ನೆರವಾಗುವ ಅವಕಾಶವಿದೆ. ಜಾಗೃತಿ ಕೊರತೆಯಿಂದ ಕೆಲವರು ಅಂಗಾಂಗ ದಾನಕ್ಕೆ
ಹಿಂದೇಟು ಹಾಕುತ್ತಿದ್ದಾರೆ. ಮೃತ ವ್ಯಕ್ತಿಯ ಚರ್ಮ,ಎಲುಬುಗಳನ್ನೂ ದಾನವಾಗಿ ಪಡೆದು, ಅಗತ್ಯ ಇರುವವರಿಗೆ ಒದಗಿಸಲು ಅವಕಾಶವಿದೆ’ ಎಂದು ತಿಳಿಸಿದರು.

ADVERTISEMENT

ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಕೆ.ಎಸ್.ಮಂಜುನಾಥ್, ‘ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರಕಸಿ ರಹಿತ ಅಂಗ ಮರುಪಡೆಯುವಿಕೆ ಕೇಂದ್ರಗಳಿದ್ದವು. ಈಗ ನಮ್ಮ ಸಂಸ್ಥೆಗೆ ಪರವಾನಿಗೆ ದೊರೆತಿದೆ. ಇದರಿಂದ ರಾಜ್ಯದ ಪ್ರಥಮ ಸರ್ಕಾರಿ ಕಸಿ ರಹಿತ ಅಂಗ ಮರುಪಡೆಯುವಿಕೆ ಕೇಂದ್ರವನ್ನು ಹೊಂದಿರುವ ಹಿರಿಮೆ ನಮ್ಮದಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.