ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಗಮಕ್ಕೆ (ಕೆಎಸ್ಡಿಎಲ್) ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಲಿಂಡಿ ಕ್ಯಾಮರಾನ್ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ, ಕರ್ನಾಟಕ-ಕೇರಳ ವ್ಯಾಪ್ತಿಯ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಜತೆ ಕೆಎಸ್ಡಿಎಲ್ ಇತಿಹಾಸ, ಕಾರ್ಯವಿಧಾನ, ಮಾರುಕಟ್ಟೆ ಜಾಲ, ಆದಾಯ, ಭವಿಷ್ಯದ ಯೋಜನೆಗಳ ಸಮಗ್ರ ನೋಟ ಒಳಗೊಂಡ ಪ್ರಾತ್ಯಕ್ಷಿಕೆ, ಉತ್ಪನ್ನಗಳ ತಯಾರಿಕೆ, ಪ್ರದರ್ಶನವನ್ನು ವೀಕ್ಷಿಸಿದರು.
‘ಭಾರತ ಮತ್ತು ಬ್ರಿಟನ್ ನಡುವೆ ಮುಕ್ತ ವಾಣಿಜ್ಯ ಒಪ್ಪಂದವಿದೆ. ನೈಪುಣ್ಯಗಳನ್ನು ಪರಸ್ಪರ ಹಿತಾಸಕ್ತಿಗೆ ಧಕ್ಕೆಯಾಗದಂತೆ ವಿನಿಮಯ ಮಾಡಿಕೊಳ್ಳಬೇಕು. ಈ ಒಪ್ಪಂದದ ಲಾಭವು ಕರ್ನಾಟಕಕ್ಕೂ ಸಿಗಲಿದೆ’ ಎಂದು ಲಿಂಡಿ ಹೇಳಿದರು.
‘ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಆಸ್ಥಾನದಿಂದ ಪರಿಣತರೊಬ್ಬರನ್ನು ಬ್ರಿಟನ್ಗೆ ಕಳುಹಿಸಿ, ಸಾಬೂನು ತಯಾರಿಕೆ ತಂತ್ರಜ್ಞಾನದ ಪರಿಚಯ ಮಾಡಿಕೊಂಡರು. ನಂತರ ವಿಶ್ವೇಶ್ವರಯ್ಯ ಅವರ ಸಹಕಾರದಲ್ಲಿ ಸಾಬೂನು ಕಾರ್ಖಾನೆ ಸ್ಥಾಪಿಸಿದರು. ಇಂದು ಸಂಸ್ಥೆ ₹416 ಕೋಟಿ ಲಾಭ ಗಳಿಸಿದೆ. ಮಾರುಕಟ್ಟೆ ವಿಸ್ತರಣೆಗೆ ಬ್ರಿಟನ್ ಸಹಕಾರ ಅಗತ್ಯ’ ಎಂದು ಹೇಳಿದ ಸಚಿವ ಎಂ.ಬಿ. ಪಾಟೀಲ ಅವರು ನೆರವು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.